ಮೈಸೂರು: ಆಹ್ವಾನ ಪತ್ರಿಕೆ ಕೊಡುವ ನೆಪದಲ್ಲಿ ಮನೆಗೆ ನುಗ್ಗಿ ದಂಪತಿಗೆ ಚಾಕುವಿನಿಂದ ಇರಿದು ಸುಲಿಗೆ ಮಾಡಲು ವಿಫಲ ಯತ್ನ ನಡೆಸಿ ಪರಾರಿಯಾಗಿದ್ದ ದಂಪತಿಯನ್ನು ವಿಜಯನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಇಲ್ಲಿನ ಹೂಟಗಳ್ಳಿ ಹೊನ್ನೇಗೌಡ ಬ್ಲಾಕ್ ನಿವಾಸಿಗಳಾದ ವೀರೇಶ್ ಮತ್ತು ಕೆ.ಪ್ರಿಯಾಂಕಾ ಬಂಧಿತರು.
ಇವರು ಕೆಎಚ್ಬಿ ಕಾಲೊನಿ ನಿವಾಸಿ ಬಾಬುರಾವ್ ಮತ್ತು ಅವರ ಪತ್ನಿ ಕಮಲಾಬಾಯಿ ಅವರ ಮೇಲೆ ಹಲ್ಲೆ ನಡೆಸಿ ಪರಾರಿಯಾದ ಬಗ್ಗೆ ಪ್ರಕರಣ ದಾಖಲಾಗಿತ್ತು.
ಹುಬ್ಬಳ್ಳಿ ಮೂಲದ ವೀರೇಶ್ ಕಳೆದ ಹಲವು ವರ್ಷಗಳಿಂದ ಮೈಸೂರಿನಲ್ಲಿ ವಾಸವಾಗಿದ್ದ. ಬಾಬೂರಾವ್ ಅವರ ಚಿನ್ನಾಭರಣ ಮಳಿಗೆಯ ಮೇಲೆ ಟ್ಯಾಟೂ ಅಂಗಡಿಯಿರಿಸಿ ವ್ಯವಹಾರ ಮಾಡುತ್ತಿದ್ದ. ಬಿಡುವಿನ ಸಮಯದಲ್ಲಿ ಆಡುತ್ತಿದ್ದ ಆನ್ಲೈನ್ ಆಟ ಮುಂದೆ ಚಟವಾಗಿ ಬೆಳೆಯಿತು. ಜೂಜು ಕಟ್ಟಿ ಆಡುತ್ತಿದ್ದರಿಂದ ಹಣವನ್ನೂ ಕಳೆದುಕೊಂಡಿದ್ದ.
ಈಚೆಗೆ ಸುಮಾರು ₹5 ಲಕ್ಷ ಸಾಲ ಮಾಡಿದ್ದು. ಸಾಲ ಪಡೆದವರೂ ಮರುಪಾವತಿಗೆ ಒತ್ತಾಯಿಸುತ್ತಿದ್ದರು. ‘ಹಣದ ಅನಿವಾರ್ಯದಿಂದ ಆತ ಚಿನ್ನದ ವ್ಯಾಪಾರಿಯನ್ನು ಬೆದರಿಸಿ ಹಣ ಪಡೆಯುವಂತೆ ಯೋಜನೆ ರೂಪಿಸಿದ್ದ. ತಾನು ಒಬ್ಬನೇ ಹೋದರೆ ಮನೆಯೊಳಗೆ ಸೇರಿಸುವುದಿಲ್ಲ ಎಂಬ ಕಾರಣಕ್ಕೆ ಪತ್ನಿಯನ್ನೂ ಕರೆದುಕೊಂಡು ಹೋಗಿದ್ದ. ಬಾಬೂರಾವ್ ನೀರು ತರಲು ಒಳಗೆ ತೆರಳಿದಾಗ ಹಣ ನೀಡುವಂತೆ ಬೆದರಿಸಿದ್ದ, ಹಣ ಇಲ್ಲವೆಂದಾಗ ನಿಮ್ಮ ಮಗ ಹರೀಶ್ ಅವರನ್ನು ಕರೆಯಿರಿ ಎಂದು ತಿಳಿಸಿದ್ದ, ಹಣ ನೀಡದಿದ್ದಾಗ ಹಲ್ಲೆ ಮಾಡಿದ್ದ’ ಎಂದು ಪೊಲೀಸರು ತಿಳಿಸಿದರು.
ಹಲ್ಲೆ ನಡೆಸಿ ಪರಾರಿಯಾಗಿದ್ದ ದಂಪತಿಯನ್ನು ಇನ್ಸ್ಪೆಕ್ಟರ್ ರವಿಶಂಕರ್ ಹಾಗೂ ಸಬ್ಇನ್ಸ್ಪೆಕ್ಟರ್ ವಿಶ್ವನಾಥ್ ನೇತೃತ್ವದ ತಂಡ ದಾವಣಗೆರೆಯಲ್ಲಿ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.