ಮೈಸೂರು: ರಾಜ್ಯ ಸರ್ಕಾರ ಘೋಷಿಸಿರುವ ರಾತ್ರಿ ಕರ್ಫ್ಯೂ ಮೈಸೂರಿನಲ್ಲಿ ಗುರುವಾರ ಯಶಸ್ವಿಯಾಯಿತು.
ರಾತ್ರಿ 9 ಗಂಟೆ ವೇಳೆಗೆ ಬಹುತೇಕ ಅಂಗಡಿಗಳು ಬಾಗಿಲು ಮುಚ್ಚಿದ್ದವು. ಜನ ಸಂಚಾರವೂ ವಿರಳವಾಗಿತ್ತು. ಸಮಯ ಕಳೆದಂತೆ ಯಾವೊಂದು ವಾಹನದ ಸಂಚಾರ ಕಂಡು ಬರಲಿಲ್ಲ.
ನಗರದ ವಿವಿಧ ವೃತ್ತಗಳಲ್ಲಿ ಸಂಚಾರ ಪೊಲೀಸರು ನಾಕಾಬಂದಿ ಕೈಗೊಂಡಿದ್ದರು. ನಿಗದಿತ ಅವಧಿ ಮೀರಿ ವಾಹನಗಳಲ್ಲಿ ಚಲಿಸುತ್ತಿದ್ದವರನ್ನು ತಡೆದು ತಪಾಸಣೆಗೊಳಪಡಿಸಿದರು. ಅಧಿಕೃತ ದಾಖಲೆ ತೋರಿಸಿದವರನ್ನು ಬಿಟ್ಟು ಕಳುಹಿಸಿದರೆ; ಅನಗತ್ಯವಾಗಿ ಸಂಚರಿಸುತ್ತಿದ್ದವರಿಗೆ ಖಡಕ್ ಎಚ್ಚರಿಕೆ ನೀಡಿದ ದೃಶ್ಯ ಗೋಚರಿಸಿದವು.
ಬಹುತೇಕರು ಸ್ವಯಂ ಪ್ರೇರಿತರಾಗಿ ರಾತ್ರಿ ಕರ್ಫ್ಯೂವಿಗೆ ಸಹಕರಿಸಿದರು. ತಡರಾತ್ರಿ ಇಡೀ ನಗರ ನಿರ್ಜನವಾಗಿತ್ತು. ಪೊಲೀಸರ ಗಸ್ತು ಸಹ ಅಷ್ಟಕ್ಕಷ್ಟೇ ಎಂಬಂತೆ ಕಂಡು ಬಂದಿತು. ಪ್ರಮುಖ ರಸ್ತೆಗಳಲ್ಲಿ ಯಾವೊಂದು ಸಂಚಾರ ಕಂಡು ಬರಲಿಲ್ಲ.