ಮೈಸೂರು: ‘ಮೈಸೂರು– ಕೊಡಗು ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಕಣಕ್ಕಿಳಿದಿರುವ ಸಮುದಾಯದ ಅಭ್ಯರ್ಥಿ ಎಂ.ಲಕ್ಷ್ಮಣ ಅವರಿಗೆ ಜಿಲ್ಲಾ ಒಕ್ಕಲಿಗರ ಸಂಘ ಒಮ್ಮತದ ಬೆಂಬಲ ನೀಡುತ್ತದೆ. ಸಮುದಾಯದ ಎಲ್ಲ ಮತದಾರರು ಈ ಬಾರಿ ಕಾಂಗ್ರೆಸ್ ಅನ್ನು ಬೆಂಬಲಿಸಬೇಕು’ ಎಂದು ಸಂಘದ ಅಧ್ಯಕ್ಷ ಸಿ.ಮರಿಸ್ವಾಮಿ ಮನವಿ ಮಾಡಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿಯಿಂದ ಒಕ್ಕಲಿಗರನ್ನು ತುಳಿಯುವ ಕೆಲಸವಾಗುತ್ತಿದೆ. ಒಕ್ಕಲಿಗರು ಎನ್ನುವ ಕಾರಣಕ್ಕೆ ಪ್ರತಾಪಸಿಂಹ ಅವರಿಗೆ ಟಿಕೆಟ್ ತಪ್ಪಿಸಲಾಗಿದೆ. ಏ.16ರಂದು ನಮ್ಮ ಸಂಘ ಸಭೆ ಮಾಡಿ ಲಕ್ಷ್ಮಣ ಅವರಿಗೆ ಸಹಕರಿಸಲು ನಿರ್ಧರಿಸಿದೆ’ ಎಂದರು.
‘ಲಕ್ಷ್ಮಣ ಅವರು ಒಕ್ಕಲಿಗರಲ್ಲ ಎಂಬ ಪ್ರತಾಪ ಸಿಂಹ ಹೇಳಿಕೆ ತಪ್ಪು. ಅವರು ಅರಿವಿಲ್ಲದೆ ಮಾತನಾಡಿದ್ದಾರೆ. 1992ರಲ್ಲಿಯೇ ಅವರು ಒಕ್ಕಲಿಗ ಸಂಘದ ಚುನಾವಣೆಯಲ್ಲಿ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದರು. ಅವರು ಒಕ್ಕಲಿಗ ಎಂಬುದು ನೂರಕ್ಕೆ ನೂರು ಸತ್ಯ. ಸಮುದಾಯ ಅವರ ಪರವಾಗಿ ಈ ಚುನಾವಣೆಯಲ್ಲಿ ಕೆಲಸ ಮಾಡಲಿದೆ. ಪ್ರತಿ ತಾಲ್ಲೂಕು ಮಟ್ಟದಲ್ಲೂ ಮುಖಂಡರನ್ನು ಭೇಟಿ ಮಾಡಿ ಲಕ್ಷ್ಮಣ ಪರ ಮತ ಹಾಕಿಸುವಂತೆ ಮನವಿ ಮಾಡುತ್ತೇವೆ’ ಎಂದು ತಿಳಿಸಿದರು.
‘ಬಿಜೆಪಿ ಅಭ್ಯರ್ಥಿ ಯದುವೀರ್ ಮತ್ತು ಅವರ ವಂಶದ ಬಗ್ಗೆ ನಮಗೆ ಅಪಾರ ಗೌರವವಿದೆ. ಚುನಾವಣೆಯೆಂದು ಬಂದಾಗ ನಮಗೆ ನಮ್ಮ ಸಮುದಾಯದ ಏಳಿಗೆ ಮುಖ್ಯವಾಗುತ್ತದೆ. ರಾಷ್ಟ್ರೀಯ ಪಕ್ಷದಿಂದ ಎಂ.ಲಕ್ಷ್ಮಣ ಅವರಿಗೆ ಟಿಕೆಟ್ ನೀಡಿದ್ದಾರೆ. ಒಂದು ವೇಳೆ ಬಿಜೆಪಿಯೂ ಒಕ್ಕಲಿಗರಿಗೇ ಟಿಕೆಟ್ ನೀಡಿದ್ದರೆ ನಾವು ಈ ರೀತಿ ಒಗ್ಗಟ್ಟು ಪ್ರದರ್ಶಿಸುವ ಅನಿವಾರ್ಯತೆ ಬರುತ್ತಿರಲಿಲ್ಲ’ ಎಂದರು.