ಮೈಸೂರು: ರಾಜ್ಕುಮಾರ್ ಕಲಾ ಸೇವಾ ಟ್ರಸ್ಟ್ನಿಂದ ರಾಜ್ಕುಮಾರ್ ಅವರ 96ನೇ ಜಯಂತಿ ಪ್ರಯುಕ್ತ ನಾದಬ್ರಹ್ಮ ಸಭಾಂಗಣದಲ್ಲಿ ನಡೆಯುತ್ತಿರುವ ನೆನಪಿನೋತ್ಸವದಲ್ಲಿ ಬುಧವಾರ ವಿವಿಧ ಕ್ಷೇತ್ರಗಳ 10 ಮಂದಿ ಸಾಧಕ ಕಲಾವಿದರಿಗೆ ‘ರಾಜ್ ಕಲಾ ಸೇವಾರತ್ನ’ ಪ್ರಶಸ್ತಿ ನೀಡಿ ಸನ್ಮಾನಿಸಿದರು.
ಡ್ರಂ ವಾದಕ ಸಿ.ಆರ್.ರಾಘವೇಂದ್ರ ಪ್ರಸಾದ್, ಗಾಯಕರಾದ ಶಾರದಮ್ಮ, ಸರ್ವಮಂಗಳ, ತಬಲಾ ವಾದಕ ಎಂ.ಸಿ.ಜಗದೀಶ್, ರಂಗಭೂಮಿ ಕಲಾವಿದೆ ಮೇರಿ ವಸಂತ, ರಿದಂ ಪ್ಯಾಡ್ ವಾದಕ ಆ್ಯಂಡ್ರ್ಯು, ಗಾಯಕರಾದ ರಾ.ಬಿ.ನಾಗರಾಜು, ವೈ.ರಮೇಶ್, ನೃತ್ಯ ನಿರ್ದೇಶಕ ಮೈಸೂರು ರಾಜು, ಗಾಯಕ ಆರ್. ರವಿ ಪ್ರಶಸ್ತಿಗೆ ಭಾಜನರಾದರು.
ರಾಜ್ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಉದ್ಯಮಿ ರವಿಗೌಡ, ‘ಅಣ್ಣಾವ್ರ ಚಿತ್ರಗಳನ್ನು ನೋಡಿ ಅದರಿಂದ ಪ್ರಭಾವಿತನಾಗಿ ಸಾಕಷ್ಟು ಕಲಿತಿದ್ದೇನೆ. ಆಯೋಜಕ ಮೈಸೂರು ಜಯರಾಂ ‘ಶತಮಾನೋತ್ಸವ ಸಂಭ್ರಮ’ಕ್ಕೂ ಸಿದ್ಧತೆ ನಡೆಸುತ್ತಿರುವುದು ಅಭಿನಂದನೀಯ’ ಎಂದರು.
ಮೈಸೂರು ಜಯರಾಂ ಮಾತನಾಡಿ, ‘ಮನೆಯಲ್ಲಿ ಇಷ್ಟೊಂದು ಸಾಲ ಮಾಡಿ ಏಕೆ ಕಾರ್ಯಕ್ರಮ ಮಾಡುತ್ತೀರಿ ಎಂದು ಪ್ರಶ್ನಿಸುತ್ತಾರೆ. ಆದರೆ, ಈ ಕಷ್ಟಗಳು ನನ್ನ ಅಭಿಮಾನವನ್ನು ತಡೆಯುವುದಿಲ್ಲ’ ಎಂದು ಭಾವುಕರಾಗಿ ನುಡಿದರು.
ರಾಜ್ಕುಮಾರ್ ಅವರು ಅಭಿನಯಿಸಿರುವ ಚಲನಚಿತ್ರಗೀತೆಗಳು ಸಭಾಂಗಣದಲ್ಲಿ ಮೇ 30ರವರೆಗೆ ಪ್ರಸ್ತುತಗೊಳ್ಳಲಿವೆ.