ಮೈಸೂರು: ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಭ್ರಷ್ಟರಾದರೆ ಪ್ರಶ್ನಿಸಿ ಹೋರಾಡಬಹುದು. ಆದರೆ, ಹೋರಾಟಗಾರರೇ ಭ್ರಷ್ಟರಾದರೆ ಅದು ಸಮಾಜಕ್ಕೆ ಅಪಾಯ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.
ಕರ್ನಾಟಕ ರಾಜ್ಯ ರೈತಸಂಘ, ಸ್ವರಾಜ್ ಇಂಡಿಯಾ, ಜನಾಂದೋಲನ ಮಹಾಮೈತ್ರಿ ವತಿಯಿಂದ ಬುಧವಾರ ಇಲ್ಲಿನ ಎಂಜಿನಿಯರುಗಳ ಸಂಸ್ಥೆಯಲ್ಲಿ ನಡೆದ ರೈತ ಹೋರಾಟಗಾರರಾದ ಎಂ.ರಾಮು ಹಾಗೂ ಜಿ.ಟಿ.ರಾಮಸ್ವಾಮಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂತಹ ಸಂದರ್ಭದಲ್ಲಿ ಎಂ.ರಾಮು ಹಾಗೂ ಜಿ.ಟಿ.ರಾಮಸ್ವಾಮಿ ಅವರು ‘ಚಳವಳಿಯ ಆಸ್ತಿ’ಯಾಗಿದ್ದರು. ಅವರು ಅನೇಕ ಹೋರಾಟಗಳಲ್ಲಿ ಜೀವದ ಹಂಗು ತೊರೆದು ಭಾಗಿಯಾಗಿದ್ದರು ಎಂದು ಶ್ಲಾಘಿಸಿದರು.
ಸೇನೆಯಲ್ಲಿ ಸೇವೆ ಸಲ್ಲಿಸಿ, ನಂತರ ಐಎಎಸ್ ಉತ್ತೀರ್ಣರಾಗಿ, ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ರಾಮಸ್ವಾಮಿ, 10 ವರ್ಷ ಅಧಿಕಾರ ಇದ್ದರೂ ರಾಜೀನಾಮೆ ನೀಡಿ, ರೈತ ಹೋರಾಟಗಳಲ್ಲಿ ಪಾಲ್ಗೊಂಡರು ಎಂದು ಹೇಳಿದರು.
‘ಎಂ.ರಾಮು ಅವರು ಮುಖ್ಯವಾಗಿ ಗಣಿಗಾರಿಕೆ ವಿರುದ್ಧದ ಹೋರಾಟದಲ್ಲಿ ಗಮನಾರ್ಹ ಪಾತ್ರ ವಹಿಸಿದ್ದರು. ಕೊಲೆ ಬೆದರಿಕೆ ಬರುತ್ತಿದ್ದರೂ, ಇವರು ಪ್ರಾಣದ ಹಂಗು ತೊರೆದು ಹೋರಾಡಿದರು’ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಜಾರಿಗೊಳಿಸಿರುವ 3 ಕೃಷಿ ಕಾಯ್ದೆಗಳು ವ್ಯವಸಾಯ ಕ್ಷೇತ್ರವನ್ನು ಕಬಳಿಸಿ, ಖಾಸಗಿ ವಲಯಗಳಿಗೆ ಆದ್ಯತೆ ನೀಡುತ್ತಿವೆ ಎಂದರು.
ಹೋರಾಟಗಾರರಾದ ಪ.ಮಲ್ಲೇಶ್, ಆಲಗೋಡು ಶಿವಕುಮಾರ್, ಪುರುಷೋತ್ತಮ್, ಹೊಸಕೋಟೆ ಬಸವರಾಜು ಇದ್ದರು.