ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ವಿಭಾಗದ 12 ರೈಲು ನಿಲ್ದಾಣ ಅಭಿವೃದ್ಧಿಗೆ ₹297 ಕೋಟಿ: ಶಿಲ್ಪಿ ಅಗರ್ವಾಲ್‌

Published 26 ಫೆಬ್ರುವರಿ 2024, 0:30 IST
Last Updated 26 ಫೆಬ್ರುವರಿ 2024, 0:30 IST
ಅಕ್ಷರ ಗಾತ್ರ

ಮೈಸೂರು: ನೈರುತ್ಯ ರೈಲ್ವೆ ಮೈಸೂರು ವಿಭಾಗದ 12 ರೈಲು ನಿಲ್ದಾಣಗಳ ಅಭಿವೃದ್ಧಿಗೆ ಚಾಲನೆ, 12 ಮೇಲ್ಸೇತುವೆ ಹಾಗೂ ಕೆಳಸೇತುವೆಗಳ ಉದ್ಘಾಟನೆ– ಶಂಕುಸ್ಥಾಪನೆ ಕಾರ್ಯಕ್ರಮವನ್ನು ಫೆ.26ರಂದು ಮಧ್ಯಾಹ್ನ 12.30ಕ್ಕೆ ಹಮ್ಮಿಕೊಳ್ಳಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೊ ಕಾನ್ಫರೆನ್ಸ್‌ ಮೂಲಕ ನೆರವೇರಿಸಲಿದ್ದಾರೆ.

‘ದೇಶದಾದ್ಯಂತ 525 ರೈಲು ನಿಲ್ದಾಣಗಳು ಮತ್ತು 1,500 ರೈಲ್ವೆ ಮೇಲ್ಸೇತುವೆ ಹಾಗೂ ಕೆಳಸೇತುವೆಗಳ ಅಭಿವೃದ್ಧಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆಯನ್ನು ನೆರವೇರಿಸಲಾಗುತ್ತಿದೆ. ಇದರಲ್ಲಿ ಮೈಸೂರು ವಿಭಾಗದ ₹ 367.86 ಕೋಟಿ ಮೊತ್ತದ ಯೋಜನೆಗಳು ಒಳಗೊಂಡಿವೆ’ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಶಿಲ್ಪಿ ಅಗರ್ವಾಲ್‌ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾಹಿತಿ ನೀಡಿದರು.

‘ಆಯಾ ನಿಲ್ದಾಣಗಳಲ್ಲಿ ಕಾರ್ಯಕ್ರಮ ನಡೆಯಲಿದ್ದು, ಆ ಭಾಗದ ಸಂಸದರು ಹಾಗೂ ಜನಪ್ರತಿನಿಧಿಗಳಿಗೆ ಆಹ್ವಾನ ನೀಡಲಾಗಿದೆ’ ಎಂದರು.

‘ಎಬಿಎಸ್‌ಎಸ್‌ (ಅಮೃತ್ ಭಾರತ್ ಸ್ಟೇಷನ್‌ ಯೋಜನೆ) ಅಡಿ ₹ 297 ಕೋಟಿ ವೆಚ್ಚದಲ್ಲಿ 12 ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುವುದು. ಆಧುನಿಕ ಸೌಲಭ್ಯ ಒದಗಿಸಲಾಗುವುದು. ಪ್ರವೇಶಗಳ ಸುಧಾರಣೆ, ಶೌಚಾಲಯ ಸೌಲಭ್ಯ, ಲಿಫ್ಟ್‌, ಎಸ್ಕಲೇಟರ್‌ ವ್ಯವಸ್ಥೆ, ಸ್ವಚ್ಛತೆಗೆ ಆದ್ಯತೆ, ಉಚಿತ ವೈ–ಫೈ ಸೌಲಭ್ಯ ಕಲ್ಪಿಸುವುದು, ಒಂದು ನಿಲ್ದಾಣ ಒಂದು ಉತ್ಪನ್ನದಂತಹ ಉಪಕ್ರಮಗಳ ಮೂಲಕ ಸ್ಥಳೀಯ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವುದು, ಪ್ರಯಾಣಿಕರಿಗೆ ಮಾಹಿತಿ ವ್ಯವಸ್ಥೆಯನ್ನು ಹೆಚ್ಚಿಸುವುದು, ವಿಶ್ರಾಂತಿ ಕೊಠಡಿಗಳ ಸ್ಥಾಪನೆ, ಸಭೆಗಳಿಗೆ ಸ್ಥಳ ನಿಗದಿ, ಲ್ಯಾಂಡ್‌ಸ್ಕೇಪಿಂಗ್‌ ಮೊದಲಾದ  ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಕೆಲವೆಡೆ, ಕಾಮಗಾರಿ ಈಗಾಗಲೇ ಶುರುವಾಗಿದೆ. 9 ತಿಂಗಳಲ್ಲಿ ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ’ ಎಂದು ವಿವರಿಸಿದರು.

‘ಈ ನಿಲ್ದಾಣಗಳಲ್ಲಿ ಅಂಗವಿಕಲರಿಗೆ ರ‍್ಯಾಂಪ್‌ ಮೊದಲಾದ ವ್ಯವಸ್ಥೆ ಒದಗಿಸಲಾಗುವುದು. ಜಲ್ಲಿಕಲ್ಲು ಇಲ್ಲದ (ನಿಲುಭಾರ) ಹಳಿಗಳನ್ನು ಪರಿಚಯಿಸುವುದು, ಅಗತ್ಯವಿರುವಲ್ಲಿ ಬಹುಮಹಡಿ ಪ್ಲಾಜಾ ನಿರ್ಮಾಣಕ್ಕೂ ಕ್ರಮ ವಹಿಸಲಾಗಿದೆ’ ಎಂದು ಹೇಳಿದರು.

‘₹ 63.94 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ 8 ರಸ್ತೆ ಕೆಳಸೇತುವೆ ಹಾಗೂ 4 ರಸ್ತೆ ಮೇಲ್ಸೇತುವೆಗಳನ್ನು ಲೋಕಾರ್ಪಣೆ ಮಾಡಲಾಗುವುದು. ಸುಬ್ರಹ್ಮಣ್ಯ ರೋಡ್–ಯಡೆಮಂಗಲ ನಡುವಿನಲ್ಲಿ ಬಜಕೆರೆ ರಸ್ತೆಯಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ (₹ 6.30 ಕೋಟಿ ವೆಚ್ಚ) ಶಂಕುಸ್ಥಾಪನೆ ನೆರವೇರಲಿದೆ’ ಎಂದು ತಿಳಿಸಿದರು.

‘ಅಪಘಾತಗಳನ್ನು ತಡೆಯುವುದು ಹಾಗೂ ಸುಗಮ ಸಂಚಾರದ ವ್ಯವಸ್ಥೆ ಕಲ್ಪಿಸಲು ಸೇತುವೆಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಹಳಿಗಳ ಸುರಕ್ಷತೆಯೂ ಇದರಿಂದ ಸಾಧ್ಯವಾಗಲಿದೆ’ ಎಂದರು.

ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ವಿಜಯಾ ಪಾಲ್ಗೊಂಡಿದ್ದರು.

ನೆರವೇರಿಸಲಿರುವ ಪ್ರಧಾನಿ ನರೇಂದ್ರ ಮೋದಿ ಆಯಾ ನಿಲ್ದಾಣಗಳಲ್ಲಿ ಕಾರ್ಯಕ್ರಮ 12 ರಸ್ತೆ ಮೇಲ್ಸೇತುವೆ, ಕೆಳಸೇತುವೆ ಬಳಕೆಗೆ

ಮೈಸೂರು–ಕುಶಾಲನಗರ ರೈಲು ಮಾರ್ಗ ನಿರ್ಮಾಣ ಸಂಬಂಧ ಸಮೀಕ್ಷೆ ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ ಶಿಲ್ಪಿ ಅಗರ್ವಾಲ್‌ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ

ಯಾವ್ಯಾವ ರೈಲು ನಿಲ್ದಾಣ ಅಭಿವೃದ್ಧಿ? (ಲೋಕಸಭಾ ಕ್ಷೇತ್ರ;ನಿಲ್ದಾಣ;ಮೊತ್ತ (₹ ಕೋಟಿಗಳಲ್ಲಿ))

ದಕ್ಷಿಣ ಕನ್ನಡ;ಬಂಟ್ವಾಳ;28.49

ಚಾಮರಾಜನಗರ;ಚಾಮರಾಜನಗರ;24.58

ಉಡುಪಿ–ಚಿಕ್ಕಮಗಳೂರು;22.94

ಚಿತ್ರದುರ್ಗ;ಚಿತ್ರದುರ್ಗ;11.78

ಹಾಸನ;ಹಾಸನ;24.55

ಹಾವೇರಿ;ರಾಣೆಬೆನ್ನೂರು;25.51

ಶಿವಮೊಗ್ಗ;ಸಾಗರ ಜಂಬಗಾರು;26.44

ಹಾಸನ;ಸಕಲೇಶಪುರ;28.69

ಶಿವಮೊಗ್ಗ;ಶಿವಮೊಗ್ಗ ಟೌನ್;24.37

ದಕ್ಷಿಣ ಕನ್ನಡ;ಸುಬ್ರಹ್ಮಣ್ಯ ರೋಡ್;26.16

ಶಿವಮೊಗ್ಗ;ತಾಳಗುಪ್ಪ;27.86

ತುಮಕೂರು;ತಿಪಟೂರು;25.63

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT