<p><strong>ಮೈಸೂರು</strong>: ‘ಅನುಭಾವಿಗಳ ದಾರಿಯಲ್ಲಿ ನಡೆಯುವುದು ಮತ್ತು ಅವರನ್ನು ಅನುಸರಿಸುವುದೇ ನಿಜವಾದ ದರ್ಶನ’ ಎಂದು ಸಂಸ್ಕೃತಿ ಚಿಂತಕ ಶಂಕರ ದೇವನೂರು ಹೇಳಿದರು.</p><p>ಇಲ್ಲಿನ ಸರಸ್ವತಿಪುರಂನ ಜೆಎಸ್ಎಸ್ ಮಹಿಳಾ ಕಾಲೇಜಿನಲ್ಲಿ ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗ ಹಾಗೂ ಕನ್ನಡ ವಿಭಾಗದ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಚಾರೋಪಾನ್ಯಾಸ ಕಾರ್ಯಕ್ರಮದಲ್ಲಿ ‘ಶರಣರ ಜೀವನ ದರ್ಶನ’ ವಿಷಯದ ಕುರಿತು ಅವರು ಮಾತನಾಡಿದರು.</p><p>‘12ನೇ ಶತಮಾನ ವೈಜ್ಞಾನಿಕ ಮತ್ತು ವೈಚಾರಿಕ ಕಾಲಘಟ್ಟವಾಗಿತ್ತು. ಶರಣ ಚಳವಳಿ ಜೀವಪರ ಕಾಳಜಿಯನ್ನು ಹೊಂದಿತ್ತು. ಧ್ವನಿ ಇಲ್ಲದವರಿಗೆ ಚೈತನ್ಯ ಶಕ್ತಿ ತುಂಬಿತು’ ಎಂದರು.</p><p>‘ಶರಣರು ಜಗತ್ತಿಗೆ ಕಾಯಕದ ಮೌಲ್ಯವನ್ನು ತಿಳಿಸಿದ ಅಸ್ತಿತ್ವವಾದಿಗಳು. ವಚನ ಸಾಹಿತ್ಯವು ಅನುಭಾವದಿಂದ ಉದಯಿಸಿದ ಅಮೃತಧಾರೆ. ವಚನಗಳ ಓದು ನಮ್ಮ ವರ್ತಮಾನದ ಬದುಕಿಗೆ ದಿವ್ಯ ಬೆಳಕಾಗಿದ್ದು, ಶಾಂತಿ ಮತ್ತು ಸಮಾಧಾನವನ್ನು ನೀಡುತ್ತದೆ’ ಎಂದು ಪ್ರತಿಪಾದಿಸಿದರು.</p><p>ಮೈಸೂರು ವಿ.ವಿ. ಪ್ರಸಾರಾಂಗದ ನಿರ್ದೇಶಕ ಎಂ. ನಂಜಯ್ಯ ಹೊಂಗನೂರು, ‘ಸುತ್ತೂರು ಮಠದ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಆ ಕಾಲಕ್ಕೆ ಚಾಮರಾಜನಗರದಲ್ಲಿ ಕಾಲೇಜು ತೆರೆಯದೇ ಹೋಗಿದ್ದರೆ ನನ್ನಂಥವರು ಪದವಿ ಪಡೆದು ಈ ಸ್ಥಾನಕ್ಕೆ ಏರಲು ಸಾಧ್ಯವಾಗುತ್ತಿರಲಿಲ್ಲ. ಸಂಸ್ಥೆಯ ಅಕ್ಷರ ಮತ್ತು ಅನ್ನ ದಾಸೋಹದ ಸೇವೆ ಸ್ಮರಣೀಯವಾದುದು’ ಎಂದರು.</p><p>‘ಪ್ರಸಾರಾಂಗವು ಈವರೆಗೆ 9ಲಕ್ಷಕ್ಕೂ ಹೆಚ್ಚಿನ ಕೃತಿಗಳನ್ನು ಮುದ್ರಿಸಿದೆ. ಓದುವ ಸಂಸ್ಕೃತಿ ಪಸರಿಸುವ ದೃಷ್ಟಿಯಿಂದ ಅತಿಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದೆ’ ಎಂದು ತಿಳಿಸಿದರು.</p><p>ಅಧ್ಯಕ್ಷತೆ ವಹಿಸಿದ್ದ ಜೆಎಸ್ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ, ‘ನಾಡಿಗೆ ಅರಮನೆ ಮತ್ತು ಗುರುಮನೆ ಸಲ್ಲಿಸಿದ ಕೊಡುಗೆ ಅಪಾರವಾದುದು’ ಎಂದು ಸ್ಮರಿಸಿದರು.</p><p>‘ಶರಣ ಸಾಹಿತ್ಯ ಪ್ರತಿ ವ್ಯಕ್ತಿಯ ವ್ಯಕ್ತಿತ್ವ ವಿಕಸನಕ್ಕೆ ದಾರಿದೀಪವಾಗಿದೆ. ವಿದ್ಯಾರ್ಥಿಗಳು ಶರಣರ ವಚನಗಳನ್ನು ಅಧ್ಯಯನ ಮಾಡಿ ಅದರಲ್ಲಿ ಸಂದೇಶವನ್ನು ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.</p><p>ಕಾಲೇಜಿನ ಪ್ರಾಂಶುಪಾಲ ರೇಚಣ್ಣ, ಕನ್ನಡ ವಿಭಾಗದ ಮುಖ್ಯಸ್ಥ ಆರ್.ಎಸ್. ಕುಮಾರ್, ಸಹಾಯಕ ಪ್ರಾಧ್ಯಾಪಕರಾದ ಹೊನ್ನಶೆಟ್ಟಿ, ಎನ್. ಎಂ. ಕೃಷ್ಣಪ್ಪ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ‘ಅನುಭಾವಿಗಳ ದಾರಿಯಲ್ಲಿ ನಡೆಯುವುದು ಮತ್ತು ಅವರನ್ನು ಅನುಸರಿಸುವುದೇ ನಿಜವಾದ ದರ್ಶನ’ ಎಂದು ಸಂಸ್ಕೃತಿ ಚಿಂತಕ ಶಂಕರ ದೇವನೂರು ಹೇಳಿದರು.</p><p>ಇಲ್ಲಿನ ಸರಸ್ವತಿಪುರಂನ ಜೆಎಸ್ಎಸ್ ಮಹಿಳಾ ಕಾಲೇಜಿನಲ್ಲಿ ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗ ಹಾಗೂ ಕನ್ನಡ ವಿಭಾಗದ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಚಾರೋಪಾನ್ಯಾಸ ಕಾರ್ಯಕ್ರಮದಲ್ಲಿ ‘ಶರಣರ ಜೀವನ ದರ್ಶನ’ ವಿಷಯದ ಕುರಿತು ಅವರು ಮಾತನಾಡಿದರು.</p><p>‘12ನೇ ಶತಮಾನ ವೈಜ್ಞಾನಿಕ ಮತ್ತು ವೈಚಾರಿಕ ಕಾಲಘಟ್ಟವಾಗಿತ್ತು. ಶರಣ ಚಳವಳಿ ಜೀವಪರ ಕಾಳಜಿಯನ್ನು ಹೊಂದಿತ್ತು. ಧ್ವನಿ ಇಲ್ಲದವರಿಗೆ ಚೈತನ್ಯ ಶಕ್ತಿ ತುಂಬಿತು’ ಎಂದರು.</p><p>‘ಶರಣರು ಜಗತ್ತಿಗೆ ಕಾಯಕದ ಮೌಲ್ಯವನ್ನು ತಿಳಿಸಿದ ಅಸ್ತಿತ್ವವಾದಿಗಳು. ವಚನ ಸಾಹಿತ್ಯವು ಅನುಭಾವದಿಂದ ಉದಯಿಸಿದ ಅಮೃತಧಾರೆ. ವಚನಗಳ ಓದು ನಮ್ಮ ವರ್ತಮಾನದ ಬದುಕಿಗೆ ದಿವ್ಯ ಬೆಳಕಾಗಿದ್ದು, ಶಾಂತಿ ಮತ್ತು ಸಮಾಧಾನವನ್ನು ನೀಡುತ್ತದೆ’ ಎಂದು ಪ್ರತಿಪಾದಿಸಿದರು.</p><p>ಮೈಸೂರು ವಿ.ವಿ. ಪ್ರಸಾರಾಂಗದ ನಿರ್ದೇಶಕ ಎಂ. ನಂಜಯ್ಯ ಹೊಂಗನೂರು, ‘ಸುತ್ತೂರು ಮಠದ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಆ ಕಾಲಕ್ಕೆ ಚಾಮರಾಜನಗರದಲ್ಲಿ ಕಾಲೇಜು ತೆರೆಯದೇ ಹೋಗಿದ್ದರೆ ನನ್ನಂಥವರು ಪದವಿ ಪಡೆದು ಈ ಸ್ಥಾನಕ್ಕೆ ಏರಲು ಸಾಧ್ಯವಾಗುತ್ತಿರಲಿಲ್ಲ. ಸಂಸ್ಥೆಯ ಅಕ್ಷರ ಮತ್ತು ಅನ್ನ ದಾಸೋಹದ ಸೇವೆ ಸ್ಮರಣೀಯವಾದುದು’ ಎಂದರು.</p><p>‘ಪ್ರಸಾರಾಂಗವು ಈವರೆಗೆ 9ಲಕ್ಷಕ್ಕೂ ಹೆಚ್ಚಿನ ಕೃತಿಗಳನ್ನು ಮುದ್ರಿಸಿದೆ. ಓದುವ ಸಂಸ್ಕೃತಿ ಪಸರಿಸುವ ದೃಷ್ಟಿಯಿಂದ ಅತಿಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದೆ’ ಎಂದು ತಿಳಿಸಿದರು.</p><p>ಅಧ್ಯಕ್ಷತೆ ವಹಿಸಿದ್ದ ಜೆಎಸ್ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ, ‘ನಾಡಿಗೆ ಅರಮನೆ ಮತ್ತು ಗುರುಮನೆ ಸಲ್ಲಿಸಿದ ಕೊಡುಗೆ ಅಪಾರವಾದುದು’ ಎಂದು ಸ್ಮರಿಸಿದರು.</p><p>‘ಶರಣ ಸಾಹಿತ್ಯ ಪ್ರತಿ ವ್ಯಕ್ತಿಯ ವ್ಯಕ್ತಿತ್ವ ವಿಕಸನಕ್ಕೆ ದಾರಿದೀಪವಾಗಿದೆ. ವಿದ್ಯಾರ್ಥಿಗಳು ಶರಣರ ವಚನಗಳನ್ನು ಅಧ್ಯಯನ ಮಾಡಿ ಅದರಲ್ಲಿ ಸಂದೇಶವನ್ನು ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.</p><p>ಕಾಲೇಜಿನ ಪ್ರಾಂಶುಪಾಲ ರೇಚಣ್ಣ, ಕನ್ನಡ ವಿಭಾಗದ ಮುಖ್ಯಸ್ಥ ಆರ್.ಎಸ್. ಕುಮಾರ್, ಸಹಾಯಕ ಪ್ರಾಧ್ಯಾಪಕರಾದ ಹೊನ್ನಶೆಟ್ಟಿ, ಎನ್. ಎಂ. ಕೃಷ್ಣಪ್ಪ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>