ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶೇಷ ರಂಗ ಪ್ರಯೋಗ: ’ಹೊಸ ದಾಖಲೆಯತ್ತ ಟಿಪ್ಪು ನಿಜಕನಸುಗಳು‘

ಕಿತ್ತೂರು ಹಾಗೂ ಕಲ್ಯಾಣ ಕರ್ನಾಟಕದಲ್ಲಿ ಪ್ರದರ್ಶನ ಜ.27ರಿಂದ
Last Updated 25 ಜನವರಿ 2023, 7:15 IST
ಅಕ್ಷರ ಗಾತ್ರ

ಮೈಸೂರು: ‘ರಂಗಾಯಣ ಮೈಸೂರು ಸಿದ್ಧಪಡಿಸಿರುವ ವಿಶೇಷ ರಂಗ ಪ್ರಯೋಗ ‘ಟಿಪ್ಪು ನಿಜಕನಸುಗಳು’ ಕನ್ನಡ ಆಧುನಿಕ ರಂಗಭೂಮಿಯಲ್ಲಿ ಹೊಸ ಇತಿಹಾಸ ಬರೆದಿದೆ’ ಎಂದು ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ತಿಳಿಸಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ‘ಮೈಸೂರು ಜೊತೆಗೆ ಬೆಂಗಳೂರು, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಮಂಗಳೂರು, ಹಾಸನ, ಪುತ್ತೂರು, ಕೊಡಗು ಮತ್ತು ಮಂಡ್ಯದಲ್ಲಿ ಒಟ್ಟು 26 ಪ್ರದರ್ಶನಗಳನ್ನು ಕಂಡಿದೆ. ಇಲ್ಲೆಲ್ಲವೂ ಟಿಕೆಟ್‌ ‘ಸೋಲ್ಡ್ಔಟ್’ ದಾಖಲೆಯೂ ನಿರ್ಮಾಣವಾಗಿದೆ. 20ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ನಾಟಕವನ್ನು ವೀಕ್ಷಿಸಿದ್ದಾರೆ’ ಎಂದು ಹೇಳಿದ್ದಾರೆ.

‘ನಾಟಕದ ಪ್ರದರ್ಶನದ ಆರಂಭದ ದಿನಗಳಲ್ಲಿ ತಕರಾರು ಎತ್ತಿದ್ದ ಕೆಲವರು, ಪ್ರದರ್ಶನಗಳು ಸಾಗುತ್ತಿದ್ದಂತೆ ಮೌನಕ್ಕೆ ಜಾರಿದ್ದಾರೆ. ಟಿಪ್ಪು ಸುಲ್ತಾನನ ಇನ್ನೊಂದು ಕರಾಳ ಮುಖದ ಅನಾವರಣ ಸಾಕ್ಷಿಸಹಿತ ಪ್ರದರ್ಶನ ಆಗುತ್ತಿದ್ದಂತೆಯೇ ಅವರಿಗೂ ಸತ್ಯದ ಅರಿವಾಗಿದೆ. ಇತ್ತೀಚೆಗೆ ಸಿಕ್ಕ ಅಧಿಕೃತ ಮಾಹಿತಿಯಂತೆ ಟಿಪ್ಪು ಸುಲ್ತಾನ್‌ ಕರ್ನಾಟಕದ ಆನೆಗುಂದಿ ಮತ್ತು ಹಂಪೆಯಲ್ಲಿ ಅನೇಕ ದೇವಾಲಯಗಳನ್ನು ನಾಶಪಡಿಸಿದ್ದು ಬಯಲಾಗಿದೆ. ಈ ಎಲ್ಲ ಮುಚ್ಚಿಟ್ಟ ಸತ್ಯಗಳು ಈ ನಾಟಕದ ಮೂಲಕ ರಾಜ್ಯದಲ್ಲಿ ಹೊಸ ಅಲೆಯನ್ನು ಎಬ್ಬಿಸಿದೆ. ಇದೊಂದು ಆಧುನಿಕ ರಂಗಭೂಮಿಯ ಗೆಲುವಾಗಿದೆ’ ಎಂದು ಸಮರ್ಥಿಸಿಕೊಂಡಿದ್ದಾರೆ.

‘ರಂಗಾಯಣವು ಕಿತ್ತೂರು ಹಾಗೂ ಕಲ್ಯಾಣ ಕರ್ನಾಟಕದ ಪ್ರದರ್ಶನ ಪ್ರವಾಸವನ್ನು ಜ.27ರಿಂದ ಫೆ.15ರವರೆಗೆ 2ನೇ ಹಂತದಲ್ಲಿ ಆರಂಭಿಸಿದೆ. ಜ.27ರಂದು ಹುಬ್ಬಳ್ಳಿ, ಜ.29ರಂದು ಧಾರವಾಡ, ಜ.31ರಂದು ಬೆಳಗಾವಿ, ಫೆ.2ರಂದು ವಿಜಯಪುರ, ಫೆ.5ರಂದು ಬಾಗಲಕೋಟೆ, ಫೆ.8ರಂದು ಬೀದರ್, ಫೆ.8 ಹಾಗೂ 10ರಂದು ಕಲಬುರಗಿ, ಫೆ.12ರಂದು ರಾಯಚೂರು, ಫೆ.14ರಂದು ಬಳ್ಳಾರಿಯಲ್ಲಿ ಪ್ರದರ್ಶನ ಇರಲಿದೆ. ಈ ಎಲ್ಲಾ ಕಡೆಯೂ ಬಹುತೇಕ ಟಿಕೆಟ್‌ಗಳು ಖರೀದಿಯಾಗಿವೆ. ಒಟ್ಟು ನೂರು ಪ್ರದರ್ಶನಗಳ ಗುರಿಯೊಂದಿಗೆ ಹೊರಟಿರುವ ರಂಗಾಯಣ ಫೆಬ್ರವರಿ ಅಂತ್ಯಕ್ಕೆ 50 ಪ್ರದರ್ಶನಗಳನ್ನು ಮುಗಿಸಲಿದೆ.`ಟಿಪ್ಪು ನಿಜಕನಸುಗಳು’ ನಾಟಕ ಕೃತಿ ಮಾರಾಟದಲ್ಲೂ ದಾಖಲೆ ಬರೆದಿದೆ. ಈಗಾಗಲೇ 12ನೇ ಆವೃತ್ತಿ ಮುದ್ರಣ ಕಂಡಿದೆ’ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT