ಬೆಳಿಗ್ಗೆ ದೇವಾಲಯದಲ್ಲಿ ಶ್ರೀಕಂಠೇಶ್ವರ ಸ್ವಾಮಿಗೆ ಜಾತ್ರೆಯ ಪ್ರಯುಕ್ತ ವಿವಿಧ ಹೂವುಗಳಿಂದ ಅಲಂಕಾರ ಮಾಡಿ, ಕ್ಷೀರಾಭಿಷೇಕ, ಫಲಪಂಚಾಮೃತ ಅಭಿಷೇಕ ಹಾಗೂ ಮಹಾನ್ಯಾಸ ಪೂರ್ವಕವಾಗಿ ರುದ್ರಾಭಿಷೇಕ, ಮಹಾ ಮಂಗಳಾರತಿ ಗಳನ್ನು ನಡೆಸಲಾಯಿತು. ನಂತರ ಪಾರ್ವತಿ ಸಮೇತ ಶ್ರೀಕಂಠೇಶ್ವರ ಸ್ವಾಮಿಯವರ ಉತ್ಸವ ಮೂರ್ತಿಗಳಿಗೆ ಚಿನ್ನ, ವಜ್ರ ವೈಢೂರ್ಯಗಳಿಂದ ಅಲಂಕರಿಸಿ, ಬೆಳಿಗ್ಗೆ 10.45 ಗಂಟೆ ಸುಮಾರಿಗೆ ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ, ಋತ್ವಿಕರು ದೇವಾಲಯದ ಹೊರಗೆ ಹೊತ್ತು ತಂದರು. ದೇವಾಲಯದ ಮುಂಭಾಗದ ಆವರಣದಲ್ಲಿ ವಿಶೇಷ ಪೂಜೆ ನಡೆಸಿದ ನಂತರ ಶಾಸಕ ದರ್ಶನ್ ಧ್ರುವನಾರಾಯಣ ಅವರ ರಥದ ಚಕ್ರಕ್ಕೆ ತೆಂಗಿನ ಕಾಯಿ ಒಡೆದು ಜಾತ್ರೆಗೆ ಚಾಲನೆ ನೀಡಿದರು.