ಮೈಸೂರು: ಶ್ರೀನಿವಾಸ ಪ್ರಸಾದ್ ಅವರು ಕೇಂದ್ರ ಸಚಿವರಾಗಿದ್ದಾಗ (2000ದಲ್ಲಿ) ನಗರದ ರಾಮಾನುಜ ರಸ್ತೆಯ ರಾಜೇಂದ್ರ ಭವನದಲ್ಲಿ ಸಮತಾ ಪಾರ್ಟಿಯ ರಾಷ್ಟ್ರೀಯ ಸಮ್ಮೇಳನ ಮತ್ತು ಪುರಭವನದಲ್ಲಿ ಸಾರ್ವಜನಿಕ ಸಭೆ ನಡೆದಿತ್ತು. ಇದಾದ ಬಳಿಕ ಶ್ರೀನಿವಾಸ ಪ್ರಸಾದ್ ತೀವ್ರ ಅಸ್ವಸ್ಥರಾಗಿದ್ದರು.
ಆಗ ಮುಖ್ಯಮಂತ್ರಿಯಾಗಿದ್ದ ಎಸ್.ಎಂ. ಕೃಷ್ಣ ಅವರು ಅಂಬುಲೆನ್ಸ್ ಹೆಲಿಕಾಪ್ಟರ್ ಕಳುಹಿಸಿ, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲು ನೆರವಾಗಿದ್ದರು. ಅಂದಿನಿಂದಲೂ ಪ್ರಸಾದ್ ಅವರಿಗೆ ಆರೋಗ್ಯ ಸಮಸ್ಯೆ ಇತ್ತು. ಆಗಿನಿಂದಲೂ ಆ ಆಸ್ಪತ್ರೆಯ ಡಾ.ಸುದರ್ಶನ್ ಬಲ್ಲಾಳ್ ಬಳಿ ಚಿಕಿತ್ಸೆ ಪಡೆಯುತ್ತಿದ್ದರು. ಕಿಡ್ನಿ ಕಸಿ ಕೂಡ ಮಾಡಲಾಗಿತ್ತು. ಕೊನೆಯದಾಗಿಯೂ ಅವರು ಅದೇ ಆಸ್ಪತ್ರೆಗೆ ದಾಖಲಾಗಿದ್ದರು.
ಅಶೋಕಪುರಂ ಬಡಾವಣೆಯವರಾದ ಪ್ರಸಾದ್, ರಾಜಕಾರಣಕ್ಕೆ ಬಂದ ನಂತರ ಸರಸ್ವತಿಪುರಂನಲ್ಲಿ ಬಾಡಿಗೆ ಮನೆಯಲ್ಲಿದ್ದರು. ಜಯಲಕ್ಷ್ಮೀಪುರಂನಲ್ಲಿ ಸ್ವಂತ ಮನೆ ಕಟ್ಟಿಸಿ (‘ಭೀಮ ಸದನ’) ಅಲ್ಲಿಗೆ ಸ್ಥಳಾಂತರಗೊಂಡಿದ್ದರು.
ಮೈಸೂರು ವಿಶ್ವವಿದ್ಯಾಲಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣ ಕೇಂದ್ರ ಪ್ರಾರಂಭಕ್ಕೆ ಪ್ರಮುಖ ಕಾರಣಕರ್ತರು. ಅಂಬೇಡ್ಕರ್ ಅವರು ಬೌದ್ಧ ಧರ್ಮ ಸ್ವೀಕರಿಸಿದ 50ನೇ ವರ್ಷದ ಸವಿನೆನಪಿಗಾಗಿ 2006ರ ನ.26ರಂದು ಮಹಾರಾಜ ಕಾಲೇಜು ಮೈದಾನದಲ್ಲಿ ಈ ಕೇಂದ್ರದ ಸಹಯೋಗದಲ್ಲಿ ‘ಬುದ್ಧನೆಡೆಗೆ.. ಮರಳಿ ಮನೆಗೆ’ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕೃಷ್ಣಮೂರ್ತಿಪುರಂನ ಅಶೋಕ ವೃತ್ತದಲ್ಲಿ ಬುದ್ಧ ವಿಹಾರ ನಿರ್ಮಾಣಕ್ಕೂ ಕಾರಣವಾದವರು.
ಜೀವಿತದ ಕೊನೆಯವರೆಗೂ ಜನಪ್ರತಿನಿಧಿಯಾಗಿಯೇ ಇದ್ದರು. ಇಂದಿರಾಗಾಂಧಿ, ರಾಜೀವ್ ಗಾಂಧಿ, ವಿ.ಪಿ. ಸಿಂಗ್, ಚಂದ್ರಶೇಖರ್, ಪಿ.ವಿ. ನರಸಿಂಹರಾವ್, ಅಟಲ್ ಬಿಹಾರಿ ವಾಜಪೇಯಿ, ನರೇಂದ್ರ ಮೋದಿ ಅವರೊಂದಿಗೆ ಕೆಲಸ ಮಾಡಿದ, ಹತ್ತಿರದಿಂದ ಬಲ್ಲವರಾಗಿದ್ದರು. ಹೆಚ್ಚು ಪ್ರಧಾನಿಗಳ ಜತೆ ಕೆಲಸ ಮಾಡಿದ ಹೆಗ್ಗಳಿಕೆ ಅವರದು.