ಮೈಸೂರು: ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ‘ಸ್ವೀಪ್’ ವಿಭಿನ್ನ ವಿಧಾನ ಅನುಸರಿಸುತ್ತಿದ್ದು, ಮತದಾರರನ್ನು ಸೆಳೆಯಲು ಮಾದರಿ ಮತಗಟ್ಟೆಗಳನ್ನು ಗುರುತಿಸಿ ತಯಾರಿ ನಡೆಸಿದೆ. ರಾಜಕಾರಣಿಗಳು ತಲುಪಲು ಸಾಧ್ಯವಾಗದ ತಟಸ್ಥ ಮತದಾರರನ್ನೂ ಸೆಳೆಯಲು ಯೋಜನೆ ರೂಪಿಸಿದೆ.
ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಮಹಿಳಾ ಮತದಾರರು ಹೆಚ್ಚಿರುವ ಐದು ಮತಗಟ್ಟೆಯನ್ನು ‘ಸಖಿ’ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಅವನ್ನು ಗುಲಾಬಿ ಬಣ್ಣದಿಂದ ಸಿಂಗರಿಸಿ, ಕಮಾನುಗಳನ್ನು ರಚಿಸಿ, ಮಹಿಳೆಯರನ್ನು ಸ್ವಾಗತಿಸಲು ಸ್ವೀಪ್ ಸಮಿತಿ ಯೋಜನೆ ರೂಪಿಸುತ್ತಿದೆ. ಜಿಲ್ಲೆಯಲ್ಲಿ ಒಟ್ಟು 55 ಸಖಿ ಮತಗಟ್ಟೆಗಳನ್ನು ಗುರುತಿಸಲಾಗಿದೆ.
ಪಿರಿಯಾಪಟ್ಟಣದ ಕಣಗಾಲ್, ಬೆಟ್ಟದಪುರ, ಕಿತ್ತೂರು, ರಾವಂದೂರು, ಆಲನಹಳ್ಳಿ, ಕೆ.ಆರ್.ನಗರದ ಪುರಸಭೆಯ ಪಶ್ಚಿಮ ಭಾಗ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಧುವನಹಳ್ಳಿ, ಕಂಚಿನಕೆರೆ, ಹರದನಹಳ್ಳಿ, ಮಿರ್ಲೆ ಪ್ರೌಢಶಾಲೆ, ಹುಣಸೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೋಮನಹಳ್ಳಿ, ಕಲ್ಕುಣಿಕೆ (ದಕ್ಷಿಣ ಭಾಗ), ಗಾವಡಗೆರೆ ಹಾಗೂ ಕರಿಗೌಡನ ರಸ್ತೆಯಲ್ಲಿನ ಶಾಲೆ, ಮನಗನಹಳ್ಳಿಯಲ್ಲಿ ಸಖಿ ಮತಗಟ್ಟೆ ತೆರೆಯಲು ನಿರ್ಧರಿಸಲಾಗಿದೆ.
ಎಚ್.ಡಿ.ಕೋಟೆ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆ, ಪಿಡಬ್ಲ್ಯುಡಿ ಕಚೇರಿ, ತಾಲ್ಲೂಕಿನ ಅಂತರಸಂತೆ, ಕೊಳಗಾಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸರಗೂರಿನ ಜೆಎಸ್ಎಸ್ ಹಿರಿಯ ಪ್ರಾಥಮಿಕ ಶಾಲೆ, ನಂಜನಗೂಡಿನ ಕಸುವಿನಹಳ್ಳಿ, ಹಲ್ಲಾರೆ, ಶಿರಮಲ್ಲಿ, ಕುರಹಟ್ಟಿ, ನೇರಳೆ, ಚಾಮುಂಡೇಶ್ವರಿ ಕ್ಷೇತ್ರದ ಬೊಮ್ಮೇನಹಳ್ಳಿ, ಇಲವಾಲ, ರತನಹಳ್ಳಿ, ಬೆಳವಾಡಿ, ಬೋಗಾದಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಗಳನ್ನೂ ಗುಲಾಬಿ ಬಣ್ಣದಿಂದ ಸಿಂಗರಿಸಲು ನಿರ್ಧರಿಸಲಾಗಿದೆ.
ಮೈಸೂರು ನಗರದ ಕೃಷ್ಣರಾಜ ಕ್ಷೇತ್ರದ ಶಾರದಾ ವಿಲಾಸ ಕಾಲೇಜು, ದೇವಯ್ಯನ ಹುಂಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಹರ್ಷಿ ಪಬ್ಲಿಕ್ ಸ್ಕೂಲ್, ಜೆಎಸ್ಎಸ್ ಸೆಂಟ್ರಲ್ ಸ್ಕೂಲ್, ಚಾಮರಾಜ ಕ್ಷೇತ್ರದ ಕುವೆಂಪು ನಗರ, ಕೈಲಾಸಪುರಂ, ಕುಂಬಾರಕೊಪ್ಪಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ನಿವೃತ್ತ ಎಂಜಿನಿಯರ್ ಅಧಿಕಾರಿಗಳ ವರುಣ ನಾಲಾ ವಿಭಾಗ, ವಿಜಯನಗರದ ಜೆಎಸ್ಎಸ್ ಪ್ರೌಢಶಾಲೆ, ನರಸಿಂಹರಾಜ ಕ್ಷೇತ್ರದ ರಾಜೀವನಗರದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ರಾಜೇಂದ್ರ ನಗರದ ಇನ್ಸ್ಟಿಟ್ಯೂಟ್ ಆಫ್ ಎಜುಕೇಶನ್ ಹೈಸ್ಕೂಲ್, ಉದಯಗಿರಿಯ ಫಾರೂಕ್ವಿಯಾ ಶಿಕ್ಷಕರ ತರಬೇತಿ ಸಂಸ್ಥೆ, ಗೌಸಿಯಾನಗರದ ಆಂಡಲಾಸ್ ನರ್ಸರಿ ಮತ್ತು ಪ್ರಾಥಮಿಕ ಶಾಲೆ, ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ವರುಣ ಕ್ಷೇತ್ರದ ಕುಪ್ಪರವಳ್ಳಿ, ಹೊಸಕೋಟೆ, ಭುಗತಹಳ್ಳಿ, ವರುಣ, ಉತ್ತನಹಳ್ಳಿ, ತಿ.ನರಸೀಪುರ ತಾಲ್ಲೂಕಿನ ಬನ್ನೂರಿನ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆ, ಹನುಮನಾಳು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಮೂಗೂರಿನ ಪಿಯು ಕಾಲೇಜು, ತಲಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೊಸ ಹೆಮ್ಮಿಗೆ ಶಾಲೆಯಲ್ಲಿ ಮತಗಟ್ಟೆಯಲ್ಲಿನ ಒಂದೊಂದು ಬೂತ್ ಅನ್ನು ಮಹಿಳಾ ಮತಗಟ್ಟೆಯಾಗಿ ಸಿಂಗರಿಸಲಾಗುತ್ತಿದೆ.
‘ಮಹಿಳಾ ಅಧಿಕಾರಿ ಸಿಬ್ಬಂದಿ’
‘ಮಹಿಳೆಯರು ಮತದಾನದಲ್ಲಿ ಸಕ್ರಿಯವಾಗಿ ಭಾಗವಹಿಸಲು ‘ಸಖಿ’ ಮತಗಟ್ಟೆ ತೆರೆಯಲಾಗುತ್ತಿದೆ. ಅಲ್ಲಿ ಚುನಾವಣಾ ಕಾರ್ಯಕ್ಕೆ ಹಾಗೂ ಭದ್ರತೆಗೆ ಮಹಿಳಾ ಅಧಿಕಾರಿ ಸಿಬ್ಬಂದಿಯನ್ನೇ ನೇಮಿಸಲಾಗುತ್ತಿದೆ. ಮತಗಟ್ಟೆಯನ್ನು ಗುಲಾಬಿ ಬಣ್ಣ ಬಳಿದು ಸಿಂಗರಿಸಲಾಗುವುದು. ಚಿತ್ರಕಲೆ ಹಾಗೂ ವರ್ಲಿ ಕಲೆ ಮೂಲಕ ಮತದಾನ ಜಾಗೃತಿ ಬರಹ ಹಾಗೂ ಮಹಿಳೆಯರ ಪ್ರಾಮುಖ್ಯತೆ ಬಿಂಬಿಸುವ ಚಿತ್ರಗಳನ್ನು ಬಿಡಿಸಲಾಗುತ್ತದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯಿತ್ರಿ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.