ಮೈಸೂರು: ‘ದೇಗುಲ, ಮಸೀದಿ, ಚರ್ಚ್ ಸೇರಿದಂತೆ ಯಾವುದೇ ಸ್ಮಾರಕ ಕೇವಲ ಆಯಾ ಸಮುದಾಯಕ್ಕೆ ಮಾತ್ರ ಸೀಮಿತವಲ್ಲ. ಅವು ಎಲ್ಲರಿಗೂ ಸೇರಿದ್ದು’ ಎಂದು ಇತಿಹಾಸ ತಜ್ಞ ಡಾ.ಶೆಲ್ವಪಿಳ್ಳೆ ಅಯ್ಯಂಗಾರ್ ಅಭಿಪ್ರಾಯಪಟ್ಟರು.
ಇಲ್ಲಿನ ದಸರಾ ವಸ್ತುಪ್ರದರ್ಶನ ಆವರಣದಲ್ಲಿರುವ ಪುರಾತತ್ವ, ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯು ಗುರುವಾರ ಆಯೋಜಿಸಿದ್ದ ‘ವಿಶ್ವ ಪಾರಂಪರಿಕ ಸಪ್ತಾಹ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಶ್ರೀರಂಗಪಟ್ಟಣದ ದರಿಯಾದೌಲತ್, ಮೈಸೂರಿನ ಸೇಂಟ್ ಫಿಲೋಮಿನಾ ಚರ್ಚ್, ಹಳೇಬೇಡಿನ ಹೊಯ್ಸಳೇಶ್ವರ ದೇಗುಲ ಎಲ್ಲವೂ ನಮ್ಮವೇ. ಅವುಗಳನ್ನು ಉಳಿಸಬೇಕಾಗಿರುವುದು ಜವಾಬ್ದಾರಿ. ಯಾರಾದರೂ ಕಿಡಿಗೇಡಿಗಳು ಪಾರಂಪರಿಕ ಕಟ್ಟಡಗಳ ಸ್ವರೂಪ ಹಾಳು ಮಾಡುತ್ತಿದ್ದರೆ, ಹೆಸರು ಬರೆದು ವಿಕೃತಿ ಮೆರೆಯುತ್ತಿದ್ದರೆ ಪ್ರಶ್ನಿಸಬೇಕು’ ಎಂದರು.
‘ಯುನೆಸ್ಕೋ ಘೋಷಿಸಿರುವ 40 ವಿಶ್ವ ಪಾರಂಪರಿಕ ತಾಣಗಳು ದೇಶದಲ್ಲಿವೆ.ಭಾರತವನ್ನೇ ವಿಶ್ವ ಪಾರಂಪರಿಕ ತಾಣವಾಗಿ ಮಾಡುವಷ್ಟು ಐತಿಹಾಸಿಕ ಸ್ಥಳಗಳು ಹೆಜ್ಜೆ ಹೆಜ್ಜೆಗೂ ಸಿಗುತ್ತವೆ. ಪಾಕಿಸ್ತಾನ, ಅಫ್ಗಾನಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಸೇರಿದಂತೆ ದಕ್ಷಿಣ ಏಷ್ಯಾದಲ್ಲಿ ಸಾವಿರಾರು ಪಾರಂಪರಿಕ ಸ್ಥಳಗಳಿದ್ದು, ಐತಿಹಾಸಿಕ ಮಹತ್ವವನ್ನು ಯಾರೂ ಮರೆಯಬಾರದು’ ಎಂದು ಹೇಳಿದರು.
ಸಮಸ್ಯೆಯಲ್ಲ:‘ವಿಶ್ವ ಪಾರಂಪರಿಕ ತಾಣವೆಂದು ಘೋಷಣೆಯಾದರೆ ಯುನೆಸ್ಕೋ ನಿಯಮಾವಳಿ ಪಾಲಿಸಬೇಕು. ಮೇಲುಕೋಟೆ, ನಂಜನಗೂಡಿನಂತ ಪಾರಂಪರಿಕ ಊರುಗಳಲ್ಲಿ ಮನೆ ದುರಸ್ತಿ ಮಾಡಬೇಕೆಂದರೆ ಅನುಮತಿ ಬೇಕು. ಅದನ್ನು ಸಮಸ್ಯೆಯೆಂದು ಭಾವಿಸಬಾರದು’ ಎಂದು ಶೆಲ್ವಪಿಳ್ಳೆ ಅಯ್ಯಂಗಾರ್ ತಿಳಿಸಿದರು.
ನವ ಮಾಧ್ಯಮ ಬಳಸಿ:‘ಆಧುನಿಕ ಕಟ್ಟಡವಾದರೂ ನಿರ್ವಹಣೆ ಮಾಡದಿದ್ದರೆ ಶಿಥಿಲಗೊಳ್ಳುತ್ತದೆ. 100 ವರ್ಷದ ಮಹಾರಾಣಿ ಕಾಲೇಜು ಕಟ್ಟಡ ಶಿಥಿಲಗೊಂಡು ನಮ್ಮ ಕಣ್ಣೆದುರೇ ಒಂದು ಭಾಗ ಬಿದ್ದಿದೆ. ಹೀಗಾಗಿ ನಿರ್ವಹಣೆ ಉತ್ತಮವಾಗಿ ಮಾಡಬೇಕು. ಜನರಲ್ಲಿ ಜಾಗೃತಿ ಮೂಡಿಸಬೇಕು. ಅದಕ್ಕಾಗಿ ಟ್ವಿಟರ್, ಫೇಸ್ಬುಕ್, ಇನ್ಸ್ಟಾಗ್ರಾಮ್ ಸೇರಿದಂತೆ ನವಮಾಧ್ಯಮಗಳನ್ನು ವಿದ್ಯಾರ್ಥಿಗಳು ಸಮರ್ಥವಾಗಿ ಬಳಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಮಾನಸಗಂಗೋತ್ರಿಯ ಪ್ರಾಚೀನ ಇತಿಹಾಸ ಮತ್ತು ಪುರಾತತ್ಬ ಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ.ವಿ.ಶೋಭಾ ಮಾತನಾಡಿ, ‘ಸ್ಮಾರಕಗಳು ಮಾನವನ ಸಾಧನೆಯ ಪ್ರತಿಬಿಂಬಗಳಾಗಿವೆ.ಕಟ್ಟಡ, ಸ್ಮಾರಕಗಳು ಮಾತ್ರವೇಪಾರಂಪರಿಕ ತಾಣಗಳಲ್ಲ. ಜೀವವೈವಿಧ್ಯದ ಆಗರವಾಗಿರುವ ಕಾಡುಗಳು, ನದಿ ಕಣಿವೆ, ಗಿರಿಶ್ರೇಣಿಗಳು ಪಾರಂಪರಿಕವೇ’ ಎಂದರು.
‘ದೇಶದ ಹಿಮಾಲಯ ರಾಷ್ಟ್ರೀಯ ಉದ್ಯಾನ, ನಂದಾದೇವಿ ಹೂಕಣಿವೆ, ಪಶ್ಚಿಮ ಘಟ್ಟಗಳು, ಸುಂದರ್ಬನ್ಸ್ ಕೂಡ ವಿಶ್ವ ಪಾರಂಪರಿಕ ತಾಣದ ಪಟ್ಟಿಯಲ್ಲಿವೆ’ ಎಂದು ತಿಳಿಸಿದರು.
ಮಹಾರಾಣಿ ಕಲಾ ಮತ್ತು ವಾಣಿಜ್ಯ ಕಾಲೇಜು, ಟೆರಿಷಿಯನ್ ಕಾಲೇಜು, ಮೈಸೂರು ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಡಿಸೈನ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಇಲಾಖೆಯ ವಸ್ತುಸಂಗ್ರಹಾಲಯವನ್ನು ವೀಕ್ಷಿಸಿ, ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಪಡೆದರು.
ಇತಿಹಾಸ ತಜ್ಞರಾದ ಡಾ.ಎನ್.ಎಸ್.ರಂಗರಾಜು,ಡಾ.ಎಚ್.ಎಂ.ಸಿದ್ದನಗೌಡರ್, ಇಲಾಖೆಯ ಉಪನಿರ್ದೇಕರಾದ ಸಿ.ಎನ್.ಮಂಜುಳಾ, ಎಂಜಿನಿಯರ್ ಸಿ.ಟಿ.ಮಹೇಶ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.