ಮೈಸೂರು: ಕಾಣೆಯಾಗಿರುವ ಟಿಬೆಟಿನ 11ನೇ ಪಂಚೆನ್ ಲಾಮಾ ಅವರ ಸುರಕ್ಷತೆಗೆ ಆಗ್ರಹಿಸಿ ಟಿಬೆಟಿಯನ್ನರು ನಗರದಿಂದ ಬೆಂಗಳೂರಿಗೆ ಪಾದಯಾತ್ರೆಯನ್ನು ಗುರುವಾರ ಆರಂಭಿಸಿದರು.
ಕೋಟೆ ಆಂಜನೇಯಸ್ವಾಮಿ ದೇಗುಲದ ಆವರಣದಲ್ಲಿ ಸೇರಿದ ಕಾರ್ಯಕರ್ತರು ವಿಶ್ವಶಾಂತಿಗಾಗಿ ಪ್ರಾರ್ಥಿಸಿ ಬಳಿಕ ಬೆಂಗಳೂರಿನತ್ತ ಹೆಜ್ಜೆ ಹಾಕಿದರು.
ಟಿಬೆಟಿಯನ್ ಧರ್ಮಗುರು ಹಾಗೂ ಬೌದ್ಧಧರ್ಮದ ಉನ್ನತ ನಾಯಕರೂ ಆದ 11ನೇ ಪಂಚೆನ್ ಲಾಮಾ ಕಾಣೆಯಾಗಿದ್ದಾರೆ. ಇವರ ಸುರಕ್ಷತೆ ಹಾಗೂ ವಿಶ್ವ ಶಾಂತಿಗೆ ಆಗ್ರಹಿಸಿ ಮೌನ ಜಾಥಾ ಹಮ್ಮಿಕೊಂಡಿರುವುದಾಗಿ ಕಾರ್ಯಕರ್ತರು ತಿಳಿಸಿದರು.
ಟಿಬೆಟಿಯನ್ ಧ್ವಜಗಳನ್ನು ಹಿಡಿದ ಕಾರ್ಯಕರ್ತರು ಹಸಿರು ಸಮವಸ್ತ್ರ ಹಾಗೂ ಬಿಳಿಯ ಟೋಪಿ ಧರಿಸಿ ಜಾಥಾದಲ್ಲಿ ಪಾಲ್ಗೊಂಡರು. ಜಾಥಾಕ್ಕೆ ಶಾಸಕ ಎಸ್.ಎ.ರಾಮದಾಸ್, ಮೇಯರ್ ಪುಷ್ಪಲತಾ ಜಗನ್ನಾಥ್ ಹಸಿರು ನಿಶಾನೆ ತೋರಿಸಿ ಶುಭ ಹಾರೈಸಿದರು.
ಈ ವೇಳೆ ಸೇಫ್ ವೀಲ್ಸ್ ಮಾಲೀಕ ಪ್ರಶಾಂತ್, ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ಉದ್ಯಮಿ ಅರಸು ಹಾಗೂ ಇನ್ನಿತರರು ಹಾಜರಿದ್ದರು.