ಮೈಸೂರು: ಕೃಷ್ಣರಾಜ ಕ್ಷೇತ್ರದ 9 ಮಂದಿ ಫಲಾನುಭವಿಗಳಿಗೆ ಶಾಸಕ ಎಸ್.ಎ.ರಾಮದಾಸ್ ತ್ರಿಚಕ್ರ ವಾಹನಗಳನ್ನು ವಿದ್ಯಾರಣ್ಯಪುರಂನ ತಮ್ಮ ಕಚೇರಿ ಬಳಿ ಗುರುವಾರ ವಿತರಿಸಿದರು.
ನಂತರ ಮಾತನಾಡಿದ ಅವರು, ‘ಕಳೆದ ತಿಂಗಳು ಹಮ್ಮಿಕೊಂಡಿದ್ದ ‘ಮೋದಿ ಯುಗೋತ್ಸವ’ದಲ್ಲಿ ವಿವಿಧ ಇಲಾಖೆಗಳ ಯೋಜನೆಯಡಿ ಸಾರ್ವಜನಿಕರಿಗೆ ವೈಯಕ್ತಿಕವಾಗಿ ಯೋಜನೆ ತಲುಪಿಸುವ ಕಾರ್ಯಕ್ರಮಕ್ಕೆ ಸಾಂತೇತಿಕವಾಗಿ ಚಾಲನೆ ನೀಡಲಾಗಿತ್ತು. ಅದರ ಮುಂದುವರಿದ ಭಾಗವಾಗಿ ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ 2021-22ನೇ ಸಾಲಿನಲ್ಲಿ ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ಅನುದಾನದಲ್ಲಿ ತ್ರಿಚಕ್ರವಾಹನಗಳನ್ನು ₹ 7.46 ಲಕ್ಷದಲ್ಲಿ ಖರೀದಿಸಿ ನೀಡಲಾಗಿದೆ’ ಎಂದು ತಿಳಿಸಿದರು.
‘ಪೌರಕಾರ್ಮಿಕರಿಗೆ ಈಗಾಗಲೇ ಎಲೆಕ್ಟ್ರಿಕ್ ವಾಹನಗಳನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಬ್ಯಾಟರಿ ಚಾಲಿತ ವಾಹನಗಳನ್ನು ವಿತರಿಸುವ ಯೋಜನೆ ಇದೆ. ಅಂತಹ ವ್ಯಾಪಾರಿಗಳ ಪಟ್ಟಿ ತಯಾರಿಸಲಾಗಿದೆ. ಪರಿಸರ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಇ-ಆಟೊರಿಕ್ಷಾಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು’ ಎಂದರು.
ಅಂಗವಿಕಲರ ಅಭಿವೃದ್ಧಿ ಅಧಿಕಾರಿ ಮಾಲಿನಿ, ಇಲಾಖೆಯ ಗೋಪಾಲ್ ಕೃಷ್ಣ ಹೆಗಡೆ, ಬಿಜೆಪಿ ನಗರ ಎಸ್ಸಿ ಮೋರ್ಚಾ ಅಧ್ಯಕ್ಷ ಈಶ್ವರ್, ಉಪಾಧ್ಯಕ್ಷ ಎಂ.ಆರ್.ಬಾಲಕೃಷ್ಣ, ದೇವರಾಜೇಗೌಡ, ಪ್ರಸಾದ್ ಬಾಬು, ಸಂತೋಷ್, ಕಾರ್ಯಾಲಯ ಕಾರ್ಯದರ್ಶಿ ಆದರ್ಶ್ ಇದ್ದರು.