ಮೈಸೂರು: ನಗರದ ಇರ್ವಿನ್ ರಸ್ತೆ ವಿಸ್ತರಣೆಗೆ ಎದುರಾಗಿದ್ದ ಕೆಲ ವಾಣಿಜ್ಯ ಕಟ್ಟಡಗಳು ಮತ್ತು ಮಸೀದಿಯ ಗೋಡೆಗಳ ತೆರವು ಕಾರ್ಯಾಚರಣೆ ಬುಧವಾರ ರಾತ್ರಿ ನಡೆಯಿತು.
ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ವತಿಯಿಂದ ತೆರವು ಕಾರ್ಯಾಚರಣೆ ನಡೆಸಲಾಯಿತು. ಇದರೊಂದಿಗೆ, ರಸ್ತೆ ವಿಸ್ತರಣೆಗೆ ಇದ್ದ ಅಡೆತಡೆ ಕೊನೆಗೂ ನಿವಾರಣೆಯಾಗಿದೆ.
ಈ ರಸ್ತೆ ವಿಸ್ತರಣೆಗೆ ಹಲವು ವರ್ಷಗಳಿಂದಲೂ ಪ್ರಯತ್ನ ನಡೆದಿತ್ತು. ಆದರೆ, ಈ ರಸ್ತೆಯಲ್ಲಿರುವ ವಾಣಿಜ್ಯ ಕಟ್ಟಡಗಳು ಮತ್ತು ಮಸೀದಿಯ ಗೋಡೆಯನ್ನು ಒಡೆಯಲು ತಡೆಯಾಜ್ಞೆ ಇದ್ದಿದ್ದರಿಂದ ಇಷ್ಟು ವರ್ಷಗಳವರೆಗೆ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ.
‘ಬುಧವಾರ ಗೋಡೆ ತೆರವುಗೊಳಿಸುವ ಕಾರ್ಯಾಚರಣೆ ಆರಂಭವಾಗಿದೆ. ಮಸೀದಿ ಮಂಡಳಿಯವರೊಂದಿಗೆ ಚರ್ಚಿಸಿ ಮನವೊಲಿಸಲಾಗಿದೆ. ನಂತರ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಇನ್ನೆರಡು ದಿನಗಳಲ್ಲಿ ಕಾರ್ಯ ಪೂರ್ಣಗೊಳ್ಳಲಿದೆ. ತೆರವಾಗುವುದರಿಂದ, ರಸ್ತೆಯನ್ನು 10ರಿಂದ 12 ಅಡಿಗಳವರೆಗೆ ವಿಸ್ತರಣೆ ಮಾಡಬಹುದಾಗಿದೆ’ ಎಂದು ಮಹಾನಗರಪಾಲಿಕೆ ಆಯುಕ್ತ ಜಿ.ಲಕ್ಷ್ಮೀಕಾಂತ್ ರೆಡ್ಡಿ ಪ್ರತಿಕ್ರಿಯಿಸಿದರು.
‘ಗೋಡೆಯನ್ನು ತೆರವುಗೊಳಿಸುವುದರಿಂದ, ಇರ್ವಿನ್ ರಸ್ತೆಯ ವಿಸ್ತರಣೆಗೆ ಇದ್ದ ಅಡ್ಡಿ ನಿವಾರಣೆ ಆದಂತಾಗಿದೆ. ಜನರಿಗೆ, ವಾಹನಗಳ ಸಂಚಾರಕ್ಕೆ ಅನುಕೂಲವಾಗಲಿದೆ. ಇದಕ್ಕಾಗಿ ಹೈಕೋರ್ಟ್ಗೆ ಮತ್ತು ಪಾಲಿಕೆಗೆ ಧನ್ಯವಾದ ಸಲ್ಲಿಸುತ್ತೇನೆ’ ಎಂದು ಸಂಸದ ಪ್ರತಾಪ ಸಿಂಹ ತಿಳಿಸಿದ್ದಾರೆ.