ಬೆಂಗಳೂರು: ಜಯಕರ್ನಾಟಕ ಜನಪರ ವೇದಿಕೆಯು ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್ಇಪಿ) ಸಾಧಕ- ಬಾಧಕಗಳ ಕುರಿತು ರಾಜ್ಯಮಟ್ಟದ ದುಂಡು ಮೇಜಿನ ಸಮಾಲೋಚನಾ ಸಭೆಯನ್ನು ಗಾಂಧಿಭವನದಲ್ಲಿ ಡಿ.14ರಂದು ಬೆಳಿಗ್ಗೆ 11 ಗಂಟೆಗೆ ಹಮ್ಮಿಕೊಂಡಿದೆ.
ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ರಾಜ್ಯ ಮುಖ್ಯ ಸಲಹೆಗಾರ ಬಿ.ಗುಣರಂಜನ್ ಶೆಟ್ಟಿ, 'ಸಭೆಯನ್ನು ಸಂವಿಧಾನ ತಜ್ಞ ರವಿವರ್ಮ ಕುಮಾರ್ ಉದ್ಘಾಟಿಸಲಿದ್ದಾರೆ. ಬಂಜಗೆರೆ ಜಯಪ್ರಕಾಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಹಿತಿ ಶ್ರೀಪಾದ್ ಭಟ್ ವಿಚಾರ ಮಂಡಿಸಲಿದ್ದಾರೆ. ‘ಪ್ರಾಥಮಿಕ ಶಿಕ್ಷಣ ಮತ್ತು ಎನ್ಇಪಿ' ಕುರಿತು ಪ್ರಾಧ್ಯಾಪಕ ಕಾ.ವೆಂ.ಶ್ರೀನಿವಾಸ ಮೂರ್ತಿ, 'ತಳ ಸಮುದಾಯಗಳು ಮತ್ತು ಎನ್ಇಪಿ' ಕುರಿತು ದಲಿತ ಮುಖಂಡ ಮಾವಳ್ಳಿ ಶಂಕರ್, 'ಖಾಸಗಿ ಶಾಲೆಗಳು ಮತ್ತು ಎನ್ಇಪಿ' ಕುರಿತು ಖಾಸಗಿ ಶಾಲೆಗಳ ಒಕ್ಕೂಟದ ಕಾರ್ಯದರ್ಶಿ ಶಶಿಕುಮಾರ್ ಮಾತನಾಡಲಿದ್ದಾರೆ' ಎಂದರು.
'ಸಂವಾದದಲ್ಲಿ ಮುಖ್ಯಮಂತ್ರಿ ಚಂದ್ರು, ಅಬ್ದುಲ್ ರೆಹಮಾನ್ ಪಾಷಾ, ಕೋಡಿಹಳ್ಳಿ ಚಂದ್ರಶೇಖರ್, ಶೃಂಗೇರಿ ಕುಮಾರ್, ಸಾ.ರಾ.ಗೋವಿಂದು, ಜಿಗಣಿ ಶಂಕರ್, ವ.ಚ.ಚನ್ನೇಗೌಡ, ಸಿ.ಕೆ.ರಾಮೇಗೌಡ, ಚೆನ್ನಕೃಷ್ಣ ಪಾಲ್ಗೊಳ್ಳಲಿದ್ದಾರೆ’ ಎಂದರು.
ವೇದಿಕೆಯ ರಾಜ್ಯ ಅಧ್ಯಕ್ಷ ಆರ್.ಚಂದ್ರಪ್ಪ, ಬೆಂಗಳೂರು ಜಿಲ್ಲಾ ಅಧ್ಯಕ್ಷ ಜೆ.ಶ್ರೀನಿವಾಸ್, ಮಹಾ ಪ್ರಧಾನ ಸಂಚಾಲಕ ರಾಧಾಕೃಷ್ಣ, ರಾಜ್ಯ ಸಂಚಾಲಕ ಪ್ರಕಾಶ್ ಗೌಡ ಭಾಗವಹಿಸಿದ್ದರು.