ರಾಯಚೂರು: ‘ಜಿಲ್ಲೆಯಲ್ಲಿ ಈಚೆಗೆ ಸುರಿದ ಆಲಿಕಲ್ಲು ಮಳೆಯಿಂದಾಗಿ ಒಟ್ಟು 17,600 ಹೆಕ್ಟೇರ್ನಷ್ಟು ಭತ್ತಕ್ಕೆ ಹಾನಿಯಾಗಿದೆ’ ಎಂದು ಕೃಷಿ ಇಲಾಖೆಯವರು ಪ್ರಾಥಮಿಕ ಮಾಹಿತಿ ಕೊಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ತಿಳಿಸಿದರು.
ಪ್ರತಿಯೊಂದು ಜಮೀನಿಗೆ ಭೇಟಿಕೊಟ್ಟು ಮಾಹಿತಿ ಸಂಗ್ರಹಿಸುವ ಸಮೀಕ್ಷೆ ಕಾರ್ಯ ಇನ್ನೂ ನಡೆಯುತ್ತಿದೆ. ಭತ್ತದ ಹಾನಿ ಉಂಟಾಗಿರುವ ಜಮೀನುಗಳಲ್ಲಿ ಎರಡು ಹೆಕ್ಟೇರ್ಗಿಂತ ಕಡಿಮೆ ಹಾಗೂ ಅದಕ್ಕಿಂತ ಹೆಚ್ಚಿನ ಪ್ರಮಾಣದ ಜಮೀನು ಹೊಂದಿರುವ ರೈತರನ್ನು ವಿಂಗಡಣೆ ಮಾಡಲಾಗುತ್ತದೆ ಎಂದರು.
ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್ಡಿಆರ್ಎಫ್) ನಿಯಮಾವಳಿ ಪ್ರಕಾರ, ಒಬ್ಬ ರೈತರಿಗೆ ಗರಿಷ್ಠ ಎರಡು ಹೆಕ್ಟೇರ್ ಹಾನಿಯನ್ನು ಪರಿಗಣಿಸಿ ಪ್ರತಿ ಹೆಕ್ಟೇರ್ಗೆ ₹13 ಸಾವಿರ ಪರಿಹಾರ ನೀಡುವುದಕ್ಕೆ ಅವಕಾಶವಿದೆ. ಇದರೊಂದಿಗೆ ರಾಜ್ಯ ಸರ್ಕಾರದಿಂದ ಎಷ್ಟು ಪರಿಹಾರ ಸೇರ್ಪಡೆ ಮಾಡಬೇಕು ಎಂಬುದರ ಬಗ್ಗೆ ಮಾರ್ಗದರ್ಶಿ ನಿಯಮಾವಳಿ ಇನ್ನೂ ಬಂದಿಲ್ಲ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.
ಕವಿತಾಳ, ಸಿರವಾರ, ರಾಯಚೂರು, ಮಸ್ಕಿ, ಲಿಂಗಸುಗೂರು ಹಾಗೂ ಸಿಂಧನೂರು ಹೋಬಳಿಗಳಲ್ಲಿ ಭತ್ತ ಹಾನಿಯಾಗಿದೆ. ದೇವದುರ್ಗದಲ್ಲಿ ದೊಡ್ಡ ಪ್ರಮಾಣದ ಹಾನಿಯಾಗಿಲ್ಲ. ಸಮೀಕ್ಷೆ ಮುಕ್ತಾಯದ ಬಳಿಕ ಸ್ಪಷ್ಟ ಚಿತ್ರಣ ತಿಳಿಯಲಿದೆ ಎಂದು ಹೇಳಿದರು.