ಸಿರವಾರ: ಕ್ರೀಡಾಕೂಟದಲ್ಲಿ ಭಾಗವಹಿಸಿ ವಾಪಸಾಗುತ್ತಿದ್ದ ಸಿರವಾರದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿಯರಿದ್ದ ಟಾಟಾ ಏಸ್ ವಾಹನವು, ತಾಲ್ಲೂಕಿನ ಹುಣಚೇಡ್ ಕ್ರಾಸ್ ಬಳಿ ಮಗುಚಿದ್ದರಿಂದ 20 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಗಾಯಗೊಂಡ ಘಟನೆ ಗುರುವಾರ ನಡೆದಿದೆ.
ಸಿರವಾರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಮಾಡಲಾಯಿತು. ಗಂಭೀರವಾಗಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿರುವ ಪವಿತ್ರಾ, ಲಕ್ಷ್ಮೀ, ಸ್ವಪ್ನಾ, ಮೀನಾಕ್ಷಿ, ಸುನೀತಾ ಹಾಗೂ ಚಾಮುಂಡಿ ಆರು ವಿದ್ಯಾರ್ಥಿನಿಯರನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಾಲ್ಲೂಕಿನ ಕುರಕುಂದಾ ಗ್ರಾಮದಲ್ಲಿ ಆಯೋಜಿಸಿದ್ದ ಶಾಲಾ ವಲಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ವಸತಿ ಶಾಲೆಯಿಂದ ವಿದ್ಯಾರ್ಥಿನಿಯರು ಗುರುವಾರ ಬೆಳಿಗ್ಗೆ ಹೋಗಿದ್ದರು.
ಟಾಟಾ ಏಸ್ ವಾಹನದಲ್ಲಿ 31 ವಿದ್ಯಾರ್ಥಿನಿಯರಿದ್ದರು. ವಾಹನ ಮಗುಚಲು ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ತಿಳಿಸಲಾಗಿದೆ. ಸಿರವಾರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಸುರಕ್ಷತೆ ಕಡೆಗಣನೆ:ವಿದ್ಯಾರ್ಥಿನಿಯರನ್ನು ಸುರಕ್ಷಿತ ವಾಹನದಲ್ಲಿ ಕ್ರೀಡಾಕೂಟಕ್ಕೆ ಕರೆದುಕೊಂಡು ಹೋಗಿ ಬರುವುದಕ್ಕೆ ಸೂಕ್ತ ವ್ಯವಸ್ಥೆ ಮಾಡುವುದನ್ನು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲರು ಮತ್ತು ಸಿಬ್ಬಂದಿ ಕಡೆಗಣಿಸಿದ್ದಾರೆ ಎಂದು ಜನರು ಆರೋಪಿಸುತ್ತಿದ್ದಾರೆ.
ಅಷ್ಟು ಸಣ್ಣ ವಾಹನದಲ್ಲಿ 30 ವಿದ್ಯಾರ್ಥಿನಿಯರನ್ನು ತುಂಬಿಸಲಾಗಿದೆ. ವಾಹನ ಚಾಲಕ ಮತ್ತು ವಾಹನದ ಬಗ್ಗೆ ಶಿಕ್ಷಕರು ಸೂಕ್ತ ರೀತಿಯಲ್ಲಿ ಗಮನ ಹರಿಸದಿರುವುದರಿಂದ ಈ ಘಟನೆ ನಡೆದಿದೆ ಎಂದು ದೂರುತ್ತಿದ್ದಾರೆ.