ಸಿರವಾರ: ‘ಕ್ಷಯ ರೋಗ ಪತ್ತೆಯಾದ ವ್ಯಕ್ತಿಗೆ ಆರು ತಿಂಗಳು ಉಚಿತ ಚಿಕಿತ್ಸೆ ನೀಡಿ ರೋಗ ಗುಣಪಡಿಸಲಾಗುವುದು’ ಎಂದು ಕ್ಷಯ ರೋಗ ಪತ್ತೆ ಕಾರ್ಯಕ್ರಮದ ಜಿಲ್ಲಾ ಸಂಯೋಜಕ ಅಮರೇಶ ನಾಯಕ ಹೇಳಿದರು.
ಪಟ್ಟಣ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕ್ಷಯರೋಗ ನಿರ್ಮೂಲನ ಕೇಂದ್ರದ ಸಹಯೋಗದಲ್ಲಿ ಶುಕ್ರವಾರ ನಡೆದ ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸೆ ಆಂದೋಲನ ಹಾಗೂ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವರ್ಷದಲ್ಲಿ ಎರಡು ಬಾರಿ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸೆ ಆಂದೋಲನ ಕಾರ್ಯಕ್ರಮ ಮಾಡುವ ಮೂಲಕ 2025ರ ವೇಳೆಗೆ ಕ್ಷಯರೋಗ ಮುಕ್ತ ರಾಜ್ಯ ಮತ್ತು ದೇಶ ಮಾಡುವ ಗುರಿ ಹೊಂದಿದ್ದು, ಅದನ್ನು ಪೂರ್ಣಗೊಳಿಸಲು ಎಲ್ಲರ ಸಹಕಾರ ಅಗತ್ಯ ಎಂದರು.
ಆಯುಷ್ ವೈದ್ಯಾಧಿಕಾರಿ ಸುನೀಲ್ ಸರೋದೆ ಮಾತನಾಡಿ,‘ಎರಡು ವಾರಕ್ಕಿಂತ ಹೆಚ್ಚು ಕೆಮ್ಮು, ಜ್ವರ, ಕಫ, ಕಫದಲ್ಲಿ ರಕ್ತ ಬೀಳುವುದು, ಎದೆ ನೋವು, ಬೆವರು ಬರುವುದು, ಹಸಿವು ಆಗದೆ ಇರುವುದು, ತೂಕ ಕಡಿಮೆ ಆಗುವ ಲಕ್ಷಣಗಳು ಕಂಡುಬರುವ ಪ್ರತಿಯೊಬ್ಬರೂ ಉಚಿತವಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದರು.
ಜಿಲ್ಲಾ ಪಿ.ಪಿ.ಎಂ.ಸಂಯೋಜಕ ಮೋಹಿನ ಪಾಷಾ, ಡಾ.ಪರಿಮಳ ಮೈತ್ರಿ, ಡಾ.ಪ್ರವೀಣ್ ಕುಮಾರ, ಡಾ.ಭಾರ್ಗವಿ ಜಾಗೀರದಾರ, ಡಾ.ಬಿ.ವಿ.ಸಿಂಗ್ ಹಾಗೂ ಕ್ಷಯರೋಗ ಮೇಲ್ವಿಚಾರಕ ಪ್ರೇಮ್ ಪ್ರಸಾದ್ ಇದ್ದರು.