ಶಕ್ತಿನಗರ: ಸರ್ವೆ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಯರಮರಸ್ ಸರ್ಕೀಟ್ ಹೌಸ್ ಸಮೀಪ ವಿಮಾನ ನಿಲ್ದಾಣ ಪ್ರದೇಶದ ಸರ್ವೆ ಕಾರ್ಯವನ್ನು ಸೋಮವಾರ ಆರಂಭಿಸಿತು.
422 ಎಕರೆ ಪ್ರದೇಶವನ್ನು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಬಳಸಿಕೊಳ್ಳಲು ಯೋಜಿಸಲಾಗಿದೆ. ವಿಮಾನ ನಿಲ್ದಾಣ ಪ್ರದೇಶದ ಜಾಗ ಗುರುತು ಮಾಡಿ, ಆ ಪ್ರದೇಶದಲ್ಲಿ ಬರುವ ಎಲ್ಲ ಗಿಡಗಳಿಗೆ ಕೆಂಪು ಬಣ್ಣದ ಮೂಲಕ ಸಂಖ್ಯೆಗಳನ್ನು ನೀಡಲಾಗುತ್ತಿದೆ.
ವಿಮಾನ ನಿಲ್ದಾಣ ಪ್ರದೇಶದೊಳಗಿನ ಮರ ಗಿಡಗಳನ್ನು ಅರಣ್ಯ ರಕ್ಷಕರ ಸಹಾಯದಿಂದ ಕೆಂಪು ಬಣ್ಣದ ಮೂಲಕ ನಂಬರಿಂಗ್ ಮಾಡಿ ವರದಿ ತಯಾರಿಸಿ ಮೇಲಾಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಪಿ.ಬೋರಳೆ ತಿಳಿಸಿದರು.
ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ, ಸರ್ವೆ ಅಧಿಕಾರಿ ಚೂಡಾಮಣಿ, ಅಶೋಕ, ಕ್ರಾಂತಿಕುಮಾರ, ಅರಣ್ಯ ರಕ್ಷಕ ರಾಘವೇಂದ್ರ ರಾಥೋಡ್, ಯಲ್ಲಪ್ಪ ಮರ್ಚೇಡ್, ಸಹಾಯಕ ಆನಂದ ಹಾಗೂ ಸುರೇಶ ಇದ್ದರು.