ಶಕ್ತಿನಗರ: ‘ಅತಿಸಾರ ಭೇದಿ ನಿಯಂತ್ರಣದ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು’ ಎಂದು ದೇವಸೂಗೂರು ಆರೋಗ್ಯ ಮತ್ತು ಕ್ಷೇಮ ಕೇಂದ್ರದ ವೈದ್ಯ ಡಾ.ಎಸ್.ಜಿ.ಕಣ್ಣೂರ್ ಹೇಳಿದರು.
ಡಿ.ಯದ್ಲಾಪುರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ನಡೆದ ಅತಿಸಾರ ಭೇದಿ ನಿಯಂತ್ರಣ ಜಾಗೃತಿ ಹಾಗೂ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಿರುವ ಮನೆಗಳಿಗೆ ತೆರಳಿ ಓ.ಆರ್.ಎಸ್ ವಿತರಿಸಲಾಗುತ್ತದೆ. ಅತಿಸಾರ ಭೇದಿ ಕಂಡುಬಂದ ಮಕ್ಕಳಿರುವ ಮನೆಗೆ ಓ.ಆರ್.ಎಸ್ ಮತ್ತು ಜಿಂಕ್ ಮಾತ್ರೆಯನ್ನು ವಿತರಿಸಲಾಗುತ್ತದೆ. ಜಿಂಕ್ ಮಾತ್ರೆಯನ್ನು ವಯಸ್ಸಿಗೆ ಅನುಗುಣವಾಗಿ 14 ದಿನಗಳವರೆಗೆ ಕೊಡಲಾಗುತ್ತದೆಎಂದುಹೇಳಿದರು.
ಎದೆ ಹಾಲಿನ ಮಹತ್ವದ ಕುರಿತು ಬಾಣಂತಿ, ಗರ್ಭಿಣಿಯರು ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಇತರೆ ಇಲಾಖೆಯವರ ಸಹಕಾರ ಅಗತ್ಯ ಎಂದು ತಿಳಿಸಿದರು.
ಅಂಗನವಾಡಿ ಕೇಂದ್ರಗಳಲ್ಲಿ ಓ.ಆರ್.ಎಸ್. ದ್ರಾವಣ ತಯಾರಿಸುವ ಹಾಗೂ ಕೈ ತೊಳೆಯುವ ವಿಧಾನಗಳ ಕುರಿತು ಪ್ರಾತ್ಯಕ್ಷಿಕೆ ನೀಡಲಾಯಿತು.
ಉಪ ಆರೋಗ್ಯ ಕೇಂದ್ರದ ಸಂರಕ್ಷಣಾಧಿಕಾರಿ ಈರಮ್ಮ, ಅಂಗನವಾಡಿ ಕಾರ್ಯಕರ್ತೆ ಶಿವಲೀಲಾ, ಭಾಗ್ಯಮ್ಮ ಹಾಗೂ ಆಶಾ ಕಾರ್ಯಕರ್ತೆ ಮಲ್ಲಮ್ಮ ಇದ್ದರು.