ಮಸ್ಕಿ: ಉಪ ಚುನಾವಣೆ ಅಖಾಡಕ್ಕೆ ಶುಕ್ರವಾರದಿಂದ ಅಧಿಕೃತವಾಗಿ ತೊಡಗಿಸಿಕೊಳ್ಳಲು ಬಂದಿರುವ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಮಸ್ಕಿಯಲ್ಲಿ ಹೂಮಳೆ ಸುರಿಸಿ ಸ್ವಾಗತಿಸಲಾಯಿತು.
ಮುದಗಲ್ ಪಟ್ಟಣದಿಂದ ಆಗಮಿಸಿದ ಅವರನ್ನು ಮಸ್ಕಿ ಕ್ಷೇತ್ರದ ಗಡಿಯಲ್ಲಿರುವ ಸಂತೆಕೆಲ್ಲೂರು, ಅಂಕುಶದೊಡ್ಡಿ ಗ್ರಾಮಗಳಲ್ಲಿ ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು.
ಮಸ್ಕಿ ಪಟ್ಟಣದಲ್ಲಿ ವಿಜಯೇಂದ್ರ ಅವರು ಮಹಾತ್ಮ ಗಾಂಧಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ತೆರೆದ ವಾಹನ ಏರಿದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು. ಬೈಕ್ ರ್ಯಾಲಿ ನಡೆಯಿತು. ಗಾಂಧಿ ನಗರದಲ್ಲಿ ನೂರಾರು ಯುವಕರು ಜೆಸಿಬಿ ಯಂತ್ರದ ಸಹಾಯದಿಂದ ಹೂವಿನ ಸುರಿಮಳೆ ಮಾಡಿದರು.
ದಾರಿಯಲ್ಲಿ ಮಹಿಳೆಯರು ಆರತಿ ಬೆಳಗಿ ತಿಲಕ ಇಟ್ಟರು. ಅಗಸಿ, ಮುಖ್ಯ ಬಜಾರ, ದೈವದಕಟ್ಟೆ, ತೇರ ಬೀದಿ, ಕನಕವೃತ್ತ, ವಾಲ್ಮೀಕಿ ವೃತ್ತ, ಬಸವ ವೃತ್ತದ ಮೂಲಕ ಬಸವೇಶ್ವರ ನಗರದ ಬಿಜೆಪಿ ಕಚೇರಿವರೆಗೆ ಮೆರವಣಿಗೆ ನಡೆಸಲಾಯಿತು.
ಕನಕವೃತ್ತದಲ್ಲಿ ಜೆಸಿಬಿ ಯಂತ್ರದ ಮೂಲಕ ಬೃಹತ್ ಹೂವಿನ ಹಾರ ಹಾಕಿ ಪಕ್ಷದ ಕಾರ್ಯಕರ್ತರು ಅಭಿನಂದಿಸಿದರು.
ಶಾಸಕ ರಾಜುಗೌಡ, ಡಾ. ಶಿವರಾಜ ಪಾಟೀಲ, ಮಾಜಿ ಶಾಸಕ ಮಾನಪ್ಪ ವಜ್ಜಲ್, ಮುಖಂಡ ಮಹಾದೇವಪ್ಪಗೌಡ ಪಾಟೀಲ್ ಸೇರಿದಂತೆ ಹಲವಾರು ಮುಖಂಡರು ಪಾಲ್ಗೊಂಡಿದ್ದರು.