ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 60ರಷ್ಟು ಮಕ್ಕಳು ತರಗತಿಗೆ ಹಾಜರು

ಶಾಲಾ ಆರಂಭೋತ್ಸವಕ್ಕೆ ಉತ್ತಮ ಸ್ಪಂದನೆ: ಶಿಕ್ಷಕರಿಂದ ಚಿಣ್ಣರಿಗೆ ಅದ್ಧೂರಿ ಸ್ವಾಗತ
Last Updated 26 ಅಕ್ಟೋಬರ್ 2021, 2:48 IST
ಅಕ್ಷರ ಗಾತ್ರ

ಮಾನ್ವಿ: ತಾಲ್ಲೂಕಿನಾದ್ಯಂತ ಸೋಮವಾರ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳ ಆರಂಭಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಯಿತು.

ಒಂದೂವರೆ ವರ್ಷದ ನಂತರ ಚಿಣ್ಣರು ಸಂಭ್ರಮದಿಂದ ಶಾಲೆಗಳಿಗೆ ಆಗಮಿಸಿದ್ದು ಕಂಡುಬಂದಿತು.

ಮಕ್ಕಳ ಸ್ವಾಗತಕ್ಕಾಗಿ ಶಾಲೆಗಳ ಆವರಣವನ್ನು ಸ್ವಚ್ಛಗೊಳಿಸಿ, ತಳಿರು–ತೋರಣಗಳಿಂದ ಸಿಂಗರಿಸಲಾಗಿತ್ತು.

ಸಮವಸ್ತ್ರ ಧರಿಸಿ ಖುಷಿಯಿಂದ ಶಾಲಾ ಆವರಣ ಪ್ರವೇಶಿಸಿದ ಮಕ್ಕಳಿಗೆ ಶಿಕ್ಷಕರು, ಎಸ್‌ಡಿಎಂಸಿ ಪದಾಧಿಕಾರಿಗಳು ಹಾಗೂ ಗ್ರಾಮಗಳ ಗಣ್ಯರು ಗುಲಾಬಿ ಹೂ, ಮಾಸ್ಕ್ ವಿತರಿಸಿ ಸ್ವಾಗತಿಸಿದರು.

ತಾಲ್ಲೂಕಿನ ಆಲ್ದಾಳ, ಸಂಗಾಪುರ ಗ್ರಾಮದ ಶಾಲೆಗಳಲ್ಲಿ ಸಿವಿಲ್ ನ್ಯಾಯಾಧೀಶ ವಿಜಯಕುಮಾರ ಎಸ್.ಹಿರೇಮಠ, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಗುಡಾಳ, ಜಿಲ್ಲಾ ಶಿಕ್ಷಣಾಧಿಕಾರಿ ಸುಖದೇವ್ ಮತ್ತಿತರ ಗಣ್ಯರು ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದರು.

ಹರವಿ ಸಮೀಪದ ರಾಧಾಕೃಷ್ಣ ಕ್ಯಾಂಪ್‌ನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾನ್ವಿಯ ತಿರಂಗಾ ಟ್ರೇರ‍್ಸ್ ಮಾಲೀಕ ಜಿಲಾನಿ ಅವರು ಮಕ್ಕಳಿಗೆ ಸ್ಕೂಲ್ ಬ್ಯಾಗ್‌ಗಳನ್ನು ವಿತರಿಸಿದರು.

ತಾಲ್ಲೂಕಿನ ಒಟ್ಟು 176 ಸರ್ಕಾರಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಿದ್ದು, ಒಟ್ಟು 11,673 ಮಕ್ಕಳು ಹಾಜರಾಗಿದ್ದರು.

ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಗುಡಾಳ ಮಾತನಾಡಿ,‘ಮಾನ್ವಿ ತಾಲ್ಲೂಕಿನಲ್ಲಿ ಶಾಲಾ ಆರಂಭೋತ್ಸವಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಮೊದಲ ದಿನ ಶೇ 60ರಷ್ಟು ಮಕ್ಕಳು ತರಗತಿಗಳಿಗೆ ಹಾಜರಾಗಿದ್ದಾರೆ. ಶಾಲೆಗಳಲ್ಲಿ ಶಿಕ್ಷಕರು, ಮಕ್ಕಳಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಕೆ, ಥರ್ಮಲ್ ಸ್ಕ್ಯಾನಿಂಗ್ ಕಡ್ಡಾಯಗೊಳಿಸಲಾಗಿದೆ. ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಶಾಲೆಗಳ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ’ ಎಂದು ತಿಳಿಸಿದರು.

ಶಿಕ್ಷಣ ಸಂಯೋಜಕರಾದ ಮಹ್ಮದ್ ಅಬ್ದುಲ್ ಯೂನುಸ್, ಸಂತೋಷಕುಮಾರ, ಮಹೇಶ ಸೇರಿದಂತೆ ಶಿಕ್ಷಣ ಇಲಾಖೆಯ ಇತರ ಅಧಿಕಾರಿಗಳು, ಸಂಪನ್ಮೂಲ ವ್ಯಕ್ತಿಗಳು ಗ್ರಾಮೀಣ ಭಾಗದ ಶಾಲೆಗಳಿಗೆ ಭೇಟಿ ನೀಡಿ ಶಾಲೆಗಳ ಆರಂಭಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT