ರಾಯಚೂರು: ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಐತಿಹಾಸಿಕ ಯಾತ್ರಾ ಸ್ಥಳ ವೀರಗೋಟ ವ್ಯಾಪ್ತಿಯ ಕೃಷ್ಣನದಿಯಲ್ಲಿ ಭಾನುವಾರ ಸ್ವಚ್ಛತಾ ಕಾರ್ಯ ನಡೆಯಿತು.
ಕೃಷ್ಣ ನದಿಯಲ್ಲಿ ಎಸೆಯಲಾಗಿದ್ದ ಗಂಟುಮೂಟೆ, ಪ್ಲಾಸ್ಟಿಕ್ ಚೀಲಗಳು, ತೆಂಗಿನಕಾಯಿ ಸೇರಿದಂತೆ ತ್ಯಾಜ್ಯವನ್ನು ತೆಗೆದು ಸ್ವಚ್ಛ ಮಾಡಲಾಯಿತು.
ನದಿಯಲ್ಲಿ ತ್ಯಾಜ್ಯಗಳನ್ನು ಎಸೆಯುವುದರಿಂದ ಪರಿಸರ ಮಾಲಿನ್ಯದ ಜತೆಗೆ ಜನರಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ವಿದ್ಯಾರ್ಥಿಗಳು ವ್ಯಾಪಾರಿಗಳಿಗೆ ಹಾಗೂ ಯಾತ್ರಾರ್ಥಿಗಳಿಗೆ ತಿಳಿವಳಿಕೆ ಹೇಳಿದರು.
ಎನ್ ಎಸ್ಎಸ್ ಅಧಿಕಾರಿ ಸಂತೋಷಕುಮಾರ ರೇವೂರ್, ಉಪನ್ಯಾಸಕ ವೆಂಕಟೇಶ ರಾಠೋಡ, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.