ರಾಯಚೂರು:ವಿದ್ಯಾರ್ಥಿಗಳು ಯಾವುದೇ ಕೋರ್ಸ್ ಆರಿಸಿಕೊಂಡಿದರೂ ಶಿಸ್ತಿನಿಂದ ಅಭ್ಯಾಸ ಮಾಡಬೇಕು. ಪರೀಕ್ಷೆ ಎನ್ನುವುದು ವ್ಯಕ್ತಿಯ ಅರ್ಹತೆ ವ್ಯಕ್ತಿತ್ವ ಮೌಲ್ಯವನ್ನು ಅಳೆಯುತ್ತವೆ ಎಂದು ಎಲ್ವಿಡಿ ಕಾಲೇಜಿನ ಪ್ರಾಚಾರ್ಯ ವೆಂಕಟೇಶ ದೇವರು ತಿಳಿಸಿದರು.
ನಗರದ ಎಲ್ವಿಡಿ ಕಾಲೇಜಿನ ಐಕ್ಯೂಎಸಿ ಹಾಗೂ ವಿದ್ಯಾರ್ಥಿ ಕಲ್ಯಾಣ ವೇದಿಕೆಯಿಂದ ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿ ಪಠ್ಯಕ್ರಮ ಅನ್ವಯ ಪರೀಕ್ಷಾ ನಮೂನೆ ಪದ್ಧತಿ ಕುರಿತು ಅರಿವು ಮೂಡಿಸಲು ಒಂದು ದಿನದ ವಿದ್ಯಾರ್ಥಿ ಕಲ್ಯಾಣ ಅಭಿವೃದ್ಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಲ್ವಿಡಿ ಕಾಲೇಜು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕಾರ್ಯಕ್ರಮ ಹಮ್ಮಿಕೊಂಡು ರಾಯಚೂರು ಭಾಗದ ಹಾಗೂ ಸಂಸ್ಥೆಯ ಉಪನ್ಯಾಸಕರಿಗೆ ತರಬೇತಿ ಹಾಗೂ ಕಾರ್ಯಗಾರ ನಡೆಸಿದೆ. ವಿದ್ಯಾರ್ಥಿಗಳಿಗೆ ಎನ್ಇಪಿ ನಮೂನೆ ಪ್ರಕಾರ ಪರೀಕ್ಷೆ ಎದುರಿಸುವ ಗೊಂದಲಗಳನ್ನು ಹೋಗಲಾಡಿಸಲು ಈ ಕಾರ್ಯಕ್ರಮ ಉಪಯೋಗವಾಗಲಿದೆ ಎಂದು ಹೇಳಿದರು.
ಐಕ್ಯೂಎಸಿ ಸಂಚಾಲಕ ಡಾ.ಜಯತೀರ್ಥ ಎನ್.ಎಸ್. ಮಾತನಾಡಿ, ಕಾಲೇಜುಗಳ ಬೆಳವಣಿಗೆ ವಿದ್ಯಾರ್ಥಿಗಳಿಂದಲೇ ಸಾಧ್ಯ. ವಿದ್ಯಾರ್ಥಿಗಳು ಕಠಿಣ ಪರಿಶ್ರಮ, ಶ್ರದ್ಧೆ ,ಪ್ರಾಮಾಣಿಕತೆ, ನಿರಂತರ ಅಭ್ಯಾಸ, ಪರೀಕ್ಷೆ ನಿರಾತಂಕ ಗುಣಗಳನ್ನು ಬಳಸಿಕೊಳ್ಳುವುದು ಅಗತ್ಯವಾಗಿದೆ ಎಂದರು.
ಉಪಪ್ರಾಚಾರ್ಯ ಪ್ರೊ.ಮಹಮೂದ್ ಟಿ. ಮಾತನಾಡಿ, ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ತಿಳಿವಳಿಕೆ ಇಲ್ಲವೆಂದು ಆತಂಕಪಡುವ ಅಗತ್ಯವಿಲ್ಲ. ಆರಂಭದಲ್ಲಿ ಅರಿಯಲು ಸ್ವಲ್ಪ ಕಷ್ಟ. ಆದರೆ ಅಸಾಧ್ಯವಲ್ಲ. ನೂತನ ಶಿಕ್ಷಣ ನೀತಿಯ ಧನಾತ್ಮಕ ಉದ್ದೇಶಗಳೊಂದಿಗೆ ಅದನ್ನು ಶಿಕ್ಷಣದಲ್ಲಿ ಅಳವಡಿಸಿಕೊಂಡಾಗ ಫಲಿತಾಂಶ ಹಿತಕರವಾಗಿರುತ್ತದೆ ಎಂದು ಹೇಳಿದರು.
ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಮಲ್ಲಣ್ಣ, ಉಪನ್ಯಾಸಕ ಪ್ರೊ. ಅಮರೇಗೌಡ, ಅನಿಲ್ ಉಪ್ರಾಳ ಮಾತನಾಡಿದರು. ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಡಾ.ಕೃಷ್ಣ ನಾಯಕ, ಪ್ರೊ.ವೆಂಕಟೇಶ, ಪ್ರೊ.ಸತ್ಯನಾರಾಯಣ ಜೋಶಿ, ತನುಜ, ಹೇಮಲತಾ, ಜಾಸ್ಮಿನ್ ಸಿಬ್ಬಂದಿ ಇದ್ದರು.
ವಿದ್ಯಾರ್ಥಿ ದಿನೇಶ ಪ್ರಾರ್ಥಿಸಿದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಗಾಯತ್ರಿ ಸ್ವಾಗತಿಸಿದರು. ಹಿಂದಿ ವಿಭಾಗ ಮುಖ್ಯಸ್ಥೆ ಡಾ. ಅರುಣಾ ನಿರೂಪಿಸಿದರು. ಉಪಪ್ರಾಚಾರ್ಯ ಡಾ.ಆಂಜನೇಯ ಓಬಳೇಶ್ ವಂದಿಸಿದರು.