ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕವಿತಾಳ | ಕಲುಷಿತ ನೀರು ಪೂರೈಕೆ: ಸಾರ್ವಜನಿಕರ ಆತಂಕ

Published 6 ಜೂನ್ 2024, 5:39 IST
Last Updated 6 ಜೂನ್ 2024, 5:39 IST
ಅಕ್ಷರ ಗಾತ್ರ

ಕವಿತಾಳ: ಪಟ್ಟಣದ ವಿವಿಧ ವಾರ್ಡ್‌ಗಳಿಗೆ ಕಲುಷಿತ ನೀರು ಪೂರೈಕೆ ಮಾಡಲಾಗುತ್ತಿದ್ದು, ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ.

ಇಲ್ಲಿನ 16 ವಾರ್ಡ್‌ಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಸಮೀಪದ ಲಕ್ಷ್ಮೀ ನಾರಾಯಣ ಕ್ಯಾಂಪ್‌ ಹತ್ತಿರ ನಿರ್ಮಿಸಿದ ಕೆರೆಯಲ್ಲಿ ನೀರು ಸಂಪೂರ್ಣ ಖಾಲಿಯಾಗಿದ್ದು, ಪಕ್ಕದಲ್ಲಿನ ಹಳೆ ಕೆರೆಯಿಂದ ನೀರು ಪೂರೈಸಲಾಗುತ್ತಿದೆ ಎನ್ನಲಾಗಿದೆ. ಬುಧವಾರ ಕೆಲವು ವಾರ್ಡ್‌ಗಳಿಗೆ ಪೂರೈಸಿದ ನೀರು ಸಂಪೂರ್ಣ ಕೆಸರು ಮಯವಾಗಿದ್ದು, ಅದರಲ್ಲಿ ಕಸ, ಕಡ್ಡಿ ಸೇರಿದಂತೆ ಗಲೀಜು ಬಂದಿದೆ. ಹಸಿರು ಬಣ್ಣಕ್ಕೆ ತಿರುಗಿದ ನೀರು ದುರ್ವಾಸನೆ ಬೀರುತ್ತಿದ್ದು, ಬಳಕೆಗೂ ಯೋಗ್ಯವಾಗಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಕೆರೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಈಗಾಗಲೇ ಕಳೆದ ಒಂದು ತಿಂಗಳಿಂದ ಐದು ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಸದ್ಯ ಕೆರೆಯಲ್ಲಿ ನೀರು ಸಂಪೂರ್ಣ ಖಾಲಿಯಾಗಿದ್ದು, ಕಲುಷಿತ ನೀರು ಪೂರೈಕೆ ಆತಂಕ ಉಂಟು ಮಾಡಿದೆ. ಕೆರೆಯಿಂದ ಪೂರೈಸುವ ನೀರನ್ನು ಕಾಯಿಸಿ, ಆರಿಸಿ ಕುಡಿಯುವುದು ಅಥವಾ ಶುದ್ಧೀಕರಣ ಘಟಕದ ನೀರು ಸೇವಿಸುವಂತೆ ಪಟ್ಟಣ ಪಂಚಾಯಿತಿ ವತಿಯಿಂದ ಸಾರ್ವಜನಿಕರಿಗೆ ಧ್ವನಿ ವರ್ಧಕದ ಮೂಲಕ ನಿತ್ಯ ಮಾಹಿತಿ ನೀಡಲಾಗುತ್ತಿದೆ.

‘ಕಾಲುವೆಗೆ ನೀರು ಹರಿಸಿದಾಗ ಕೆರೆಗೆ ನೀರು ಭರ್ತಿ ಮಾಡುವಲ್ಲಿ ಅಧಿಕಾರಿಗಳು ಆಸಕ್ತಿ ವಹಿಸಿ ಕೆಲಸ ಮಾಡಲಿಲ್ಲ. ಹೀಗಾಗಿ ನೀರಿನ ಕೊರತೆ ಉಂಟಾಗಿದೆ ಮತ್ತು ಕೊಳವೆಬಾವಿ ಕೆಟ್ಟು ಒಂದೂವರೆ ತಿಂಗಳು ಕಳೆದರೂ ಅದರ ದುರಸ್ತಿ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಹೀಗಾಗಿ ಪಟ್ಟಣದ ಜನತೆ ನೀರಿಗಾಗಿ ಪರದಾಡುವಂತಾಗಿದೆ. ಕಲುಷಿತ ನೀರಿನಿಂದ ತೊಂದರೆ ಉಂಟಾಗುವ ಮೊದಲು ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು’ ಎಂದು ಪಟ್ಟಣ ಪಂಚಾಯಿತಿ ಸದಸ್ಯ ರಮೇಶ ನಗನೂರು ಆಗ್ರಹಿಸಿದರು.

ಕವಿತಾಳದಲ್ಲಿ ಬುಧವಾರ ಪೂರೈಸಿದ ಕುಡಿಯುವ ನೀರು ಕಲುಷಿತಗೊಂಡಿರುವುದು
ಕವಿತಾಳದಲ್ಲಿ ಬುಧವಾರ ಪೂರೈಸಿದ ಕುಡಿಯುವ ನೀರು ಕಲುಷಿತಗೊಂಡಿರುವುದು

ಕೊಳವೆಬಾಯಿ ನೀರು ಪೂರೈಸುವಂತೆ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಬಗ್ಗೆ ಮಾಹಿತಿ ಪಡೆದು ಕ್ರಮ ವಹಿಸಲಾಗುವುದು

-ಮಲ್ಲಿಕಾರ್ಜುನ ವಡ್ಡನಗೇರಿ ತಹಶೀಲ್ದಾರ್ (ಆಡಳಿತಾಧಿಕಾರಿ ಪಟ್ಟಣ ಪಂಚಾಯಿತಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT