ದೇವದುರ್ಗ:ತಾಲ್ಲೂಕಿನ ಅಭಿವೃದ್ಧಿ ಕೇವಲ ಶಾಸಕ ಕೆ.ಶಿವನಗೌಡನಾಯಕರ ಮಾತಿನಲ್ಲೆ ಆಗಿದೆ. ಯಾವುದೇ ಗ್ರಾಮದಲ್ಲಿ→ಕಾಲಿಟ್ಟರು ಹದಗೆಟ್ಟ ರಸ್ತೆ, ಗುಡಿಗಳು ದರ್ಶನವಾಗುತ್ತಿವೆ. ಸರ್ಕಾರದಿಂದ ಮಂಜೂರಾದ ನೂರಾರು ಕೋಟಿ ರೂಪಾಯಿಯನ್ನು ಶಾಸಕರು ವ್ಯವಸ್ಥಿತವಾಗಿ ಲೂಟಿ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಪಕ್ಷದ ತಾಲ್ಲೂಕು ಅಧ್ಯಕ್ಷ ಬುಡ್ಡನಗೌಡ ಜಾಗಟಗಲ್ ಆರೋಪಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 224 ಕ್ಷೇತ್ರಗಳಲ್ಲಿ ನಡೆಯುವಂತಹ ಅಭಿವೃದ್ಧಿ ಕೆಲಸಗಳು ದೇವದುರ್ಗದಲ್ಲಿ ನಡೆಯುತ್ತಿವೆ. ಆದರೆ ಎಲ್ಲಿ ನಡೆಯದಂಥ ಭ್ರಷ್ಟಾಚಾರ ಶಾಸಕರಿಂದ ನಡೆಯುತ್ತಿದೆ ಎಂದು ದೂರಿದರು.
ಅಖಂಡ ದೇವದುರ್ಗ ತಾಲ್ಲೂಕು ಉಳಿವಿಗಾಗಿ ಈಚೆಗೆ ಹೋರಾಟ ಮಾಡಿದ ಹೋರಾಟಗಾರರ ಮೇಲೆ ಶಾಸಕರು ಪೊಲೀಸ್ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಯಾರೊಬ್ಬರ ಒತ್ತಡಕ್ಕೆ ಮಣಿದು ಪ್ರಕರಣ ದಾಖಲಿಸಿಕೊಂಡಿರುವುದನ್ನು ಮರು ಪರಿಶೀಲಿಸಬೇಕೆಂದು ಒತ್ತಾಯಿಸಿದರು.
ಅರಕೇರಾ ತಾಲ್ಲೂಕು ವಿರೋಧಿಸಿ ಮತ್ತು ಅಖಂಡ ದೇವದುರ್ಗ ತಾಲ್ಲೂಕು ಉಳಿವಿಗಾಗಿ ಕೊತ್ತದೊಡ್ಡಿ ಗ್ರಾಮಸ್ಧರು ಹಾಗೂ ಜೆಡಿಎಸ್ ಪಕ್ಷಕದ ಮುಖಂಡರು ಈಚೆಗ ಪಟ್ಟಣದಲ್ಲಿ ಪ್ರತಿಭಟನೆ ಮಾಡುವ ಸಂದರ್ಭದಲ್ಲಿ ಶಾಸಕರು ಪೊಲೀಸರನ್ನು ಬಳಸಿಕೊಂಡು ಹೋರಾಟಗಾರ ಮೇಲೆ ಪ್ರಕರಣ ದಾಖಲಿಸಿ ತಮ್ಮ ಅಧಿಕಾರವನ್ನು ದುರುಪಯೋಗ ಪಡೆಸಿದ್ದಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಕೂಡಲೇ ಹೋರಾಟಗಾರ ಮೇಲೆ ಹಾಕಿರುವ ಪ್ರಕರಣವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಅಖಂಡ ದೇವದುರ್ಗ ತಾಲ್ಲೂಕು ಉಳಿವಿಗಾಗಿ ಈಚೆಗೆ ತಾಲ್ಲೂಕಿನಿಂದ ಸುಮಾರು 25ಕ್ಕೂ ಹೆಚ್ಚು ಜನ ಮುಖಂಡರು ಮುಖ್ಯಮಂತ್ರಿ ಬಿ,ಎಸ್,ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಎಚ್.ಡಿ.ಕುಮಾರ ಸ್ವಾಮಿ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ್ದರು. ಇದಕ್ಕೆ ಹೊಸ ತಾಲ್ಲೂಕು ಘೋಷಣೆಯನ್ನು ಮರು ಪರಿಶೀಲಿಸಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದರು.
ಅಖಂಡ ದೇವದುರ್ಗ ತಾಲ್ಲೂಕು ಉಳಿವಿಗಾಗಿ ಮತ್ತು ಶಾಸಕರ ಭ್ರಷ್ಟಾಚಾರ ಕುರಿತು ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜೆಡಿಎಸ್ ಪಕ್ಷದ ಮುಖಂಡರಾದ ಕರೆಮ್ಮ ಗೋಪಾಲಕೃಷ್ಣಾ, ಶರಣಪ್ಪ ಬಳೆ, ಅಮರೇಶ ಪಾಟೀಲ್, ಇಸಾಕ್ ಮೇಸ್ತ್ರಿ ರಾಮದುರ್ಗ, ಮುನ್ನಬೈ, ಶಾಲಂ ಉದ್ದಾರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.