ರಾಯಚೂರು: ಅಭಿವೃದ್ದಿ ಹೊಂದಿದ ದೇಶಗಳ ಜೊತೆಗೆ ಭಾರತ ದೇಶವನ್ನು ಹೋಲಿಸಿದರೆ ಶೇ 30 ರಷ್ಟು ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದೆ ಎಂದು ಜಿಲ್ಲಾ ನೆಹರು ಯುವ ಕೇಂದ್ರದ ಯುವ ಸಮನ್ವಯ ಅಧಿಕಾರಿ ವಿಪಿನ್ ಕುಮಾರ್ ಹೇಳಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನೆಹರು ಯುವ ಕೇಂದ್ರ, ಭಾರತ ಸೇವಾದಳ, ಭಾರತೀಯ ರೆಡ್ಕ್ರಾಸ್ ಸಂಸ್ಥೆ, ಯುವ ಸ್ಪಂದನ ಕೇಂದ್ರ, ಡಾ.ಬಿ.ಆರ್.ಅಂಬೇಡ್ಕರ್ ಯುವ ಅಭಿವೃದ್ದಿ ಸಂಘದಿಂದ ಮಂಗಳವಾರ ಹಮ್ಮಿಕೊಂಡಿದ್ದ ’ಶಿಕ್ಷಣ, ಪೌಷ್ಟಿಕತೆ ಅರಿವು’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಳ್ಳಿಗಳಲ್ಲಿ ಮಕ್ಕಳಿಗೆ ಅಪೌಷ್ಟಿತೆಯ ಕೊರತೆ ಇದೆ. ಅಪೌಷ್ಟಿಕತೆ ನೀಗಿಸಲು ಕೇಂದ್ರ ಸರ್ಕಾರದಿಂದ ಮಾತೃಶ್ರೀ ಯೋಜನೆ, ಮಾತೃವಂದನಾ ಯೋಜನೆ ಸೇರಿದಂತೆ ಇನ್ನೂ ಹಲವು ಯೋಜನೆ ಆರಂಭಿಸಿದೆ ಎಂದು ತಿಳಿಸಿದರು.
ಅಪೌಷ್ಟಿಕತೆ ನಿವಾರಣೆಗೆ ಅಂಗನವಾಡಿ ಕೇಂದ್ರಗಳಲ್ಲಿ ಬಾಣಂತಿಯರಿಗೆ ಮತ್ತು ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ತಮ್ಮ ಗ್ರಾಮದಲ್ಲಿ ಪೌಷ್ಟಿಕ ಆಹಾರ ಸೇವಿಸುವಂತೆ ಹಾಗೂ ಮಕ್ಕಳಿಗೆ ಶಿಕ್ಷಣ ನೀಡುವಂತೆ ಪಾಲಕರಿಗೆ ಅರಿವು ಮೂಡಿಸುವ ಕಾರ್ಯ ಮಾಡಬೇಕು ಎಂದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ವಕೀಲ ಅತಾವುಲ್ಲಾ ಮಾತನಾಡಿ, ಪ್ರತಿಯೊಬ್ಬರು ತಮ್ಮ ಆರೋಗ್ಯದ ಕಡೆ ಗಮನಕೊಡಬೇಕು. ಉತ್ತಮ ಆಹಾರ ಪದಾರ್ಥಗಳನ್ನು ಸೇವಿಸಿ ದೈಹಿಕವಾಗಿ ಸದೃಢರಾಗಿರಿ ಎಂದರು.
ಉಡಮಗಲ್ ಯುವ ಪರಿವರ್ತಕ ಟಿ.ರಾಮಯ್ಯ ನಾಯಕ ಮಾತನಾಡಿ, ಶಿಕ್ಷಣ, ಆರೊಗ್ಯ ಮತ್ತು ಜೀವನ ಶೈಲಿ, ಸುರಕ್ಷತೆ, ಲಿಂಗ ಮತ್ತು ಲೈಂಗಿಕತೆ ಬಗ್ಗೆ ತಿಳಿಸಿ ಮಾರ್ಗದರ್ಶವನ್ನು ಉಚಿತವಾಗಿ ಕೇಂದ್ರದ ಮುಲಕ ಪಡೆಯಬಹುದಾಗಿದೆ ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಬೂದೆಪ್ಪ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಕೇಂದ್ರ ಸರಕಾರವು ಆಹಾರ ಪೌಷ್ಠಿಕಾಂಶ ನಿವರಣೆಗೆ ಬಗ್ಗೆ ಅನೇಕ ಯೋಜನೆಗಳು ಹಮ್ಮಿಕೊಳ್ಳಲಾಗಿದೆ. ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ರಾಜ್ಯಶಾಸ್ತ್ರ ಉಪನ್ಯಾಸಕ ವೆಂಕಟೇಶ, ತಿರುಮಲೇಶ, ಬಸವರಾಜ, ವಿದ್ಯಾರ್ಥಿಗಳು ಇದ್ದರು.