ರಾಯಚೂರು: ಜಿಲ್ಲೆಯಲ್ಲಿ ವಾರಾಂತ್ಯ ಶನಿವಾರ ಎಲ್ಲೆಡೆಯಲ್ಲೂ ಲಾಕ್ಡೌನ್ ಜಾರಿ ಆಗಿತ್ತು.
ಅಗತ್ಯವಸ್ತುಗಳ ಮಳಿಗೆಗಳನ್ನು ಹೊರತುಪಡಿಸಿ ಉಳಿದೆಲ್ಲ ಅಂಗಡಿಗಳು ಬಂದ್ ಆಗಿದ್ದವು. ಪ್ರತಿದಿನ ಜನರಿಂದ ಕೂಡಿರುತ್ತಿದ್ದ ತೀನ್ ಕಂದಿಲ್, ಸೂಪರ್ ಬಜಾರ್, ಚಂದ್ರಮೌಳೇಶ್ವರ ವೃತ್ತ, ಗಂಜ್ ರಸ್ತೆಗಳು ಖಾಲಿಖಾಲಿಯಾಗಿದ್ದವು. ರಸ್ತೆಯುದ್ದಕ್ಕೂ ಮಳಿಗೆಗಳು ಬಂದ್ ಆಗಿದ್ದರಿಂದ ಜನದಟ್ಟಣೆ ಇರಲಿಲ್ಲ.
ಆದರೆ, ರಸ್ತೆಗಳಲ್ಲಿ ವಾಹನಗಳ ಸಂಚಾರ ಸಹಜವಾಗಿತ್ತು. ಸರ್ಕಾರಿ ಬಸ್ ಸಂಚಾರ ಇದ್ದುದರಿಂದ ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಎಂದಿನಂತೆ ಬರುತ್ತಿರುವುದು ಕಂಡುಬಂತು. ಪೊಲೀಸರು ಬಡಾವಣೆಗಳಲ್ಲಿ ಸಂಚರಿಸಿದರು.
ಕೆಲವೆಡೆ ಒಂದೆಡೆ ಸೇರಿದ್ದ ಜನರಿಗೆ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಪೊಲೀಸರು ಸೂಚಿಸಿದರು.
ರಸ್ತೆಗಳಲ್ಲಿ ಅನಗತ್ಯ ಸಂಚರಿಸುವವರ ಮೇಲೆ ನಿಗಾ ವಹಿಸಿದ್ದ ಪೊಲೀಸರು, ಸಂಚರಿಸುವ ಉದ್ದೇಶವನ್ನು ವಿಚಾರಿಸುತ್ತಿದ್ದರು. ಜೊತೆಗೆ ಮಾಸ್ಕ್ ಧರಿಸದೇ ಸಂಚರಿಸುತ್ತಿದ್ದವರಿಗೆ ದಂಡ ಹಾಕಲಾಗುವುದು ಎಂದು ಎಚ್ಚರಿಸಿ ಕಳುಹಿಸುತ್ತಿದ್ದರು.
ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಸ್ಟೇಷನ್ ವೃತ್ತ, ಗಂಜ್ ವೃತ್ತಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರಿದ್ದರು. ಸಂಜೆಯ ವೇಳೆಗೆ ನಗರದ ಬಹುತೇಕ ಪ್ರದೇಶಗಳು ಜನ ಸಂಚಾರ ಇಲ್ಲದೇ ಬಿಕೋ ಎನ್ನುತ್ತಿದ್ದವು.