ಲಿಂಗಸುಗೂರು: ‘ಪುರಸಭೆ ವ್ಯಾಪ್ತಿಯ 23 ವಾರ್ಡ್ಗಳಲ್ಲಿ ಕೊಳಗೇರಿ ಪ್ರದೇಶಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಅಂಥ ಪ್ರದೇಶಗಳ ಅಭಿವೃದ್ಧಿ ಮತ್ತು ನಾಗರಿಕರಿಗೆ ಮೂಲ ಸೌಲಭ್ಯ ಒದಗಿಸಲು ಅನುದಾನ ಬಿಡುಗಡೆ ಮಾಡಬೇಕು’ ಎಂದು ಸರ್ವ ಸದಸ್ಯರು ಶಾಸಕ ಡಿ.ಎಸ್ ಹೂಲಗೇರಿಗೆ ಮನವಿ ಮಾಡಿದರು.
ಸೋಮವಾರ ನಗರೋತ್ಥಾನ ಯೋಜನೆ ಕುರಿತು ಪುರಸಭೆ ಮುಖ್ಯಾಧಿಕಾರಿಗಳ ಜತೆಗೆ ಚರ್ಚಿಸಲು ಆಗಮಿಸಿದ್ದ ಶಾಸಕ ಡಿ.ಎಸ್ ಹೂಲಗೇರಿ ಅವರನ್ನು ಖುದ್ದು ಭೇಟಿ ಮಾಡಿದ ಸದಸ್ಯರು, ನಗರೋತ್ಥಾನ ಯೋಜನೆಯಡಿ ತಮ್ಮ ವಾರ್ಡ್ಗಳಲ್ಲಿ ಅಗತ್ಯ ಇರುವ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ಪಟ್ಟಣ ಸೇರಿದಂತೆ ಕರಡಕಲ್ಲ, ಕಸಬಾ ಲಿಂಗಸುಗೂರು, ಹುಲಿಗುಡ್ಡ ಹಾಗೂ ಸುತ್ತಮುತ್ತ 300ಕ್ಕೂ ಹೆಚ್ಚು ಹೊಸ ಬಡಾವಣೆಗಳು ತಲೆ ಎತ್ತಿವೆ. ಬಹುತೇಕ ಬಡಾವಣೆಗಳಲ್ಲಿ ರಸ್ತೆ, ಚರಂಡಿ, ವಿದ್ಯುತ್ ಸೇರಿ ಅಗತ್ಯ ಸೌಲಭ್ಯಗಳ ಕೊರತೆ ಇದೆ. ನಾಗರಿಕರು ಪರದಾಡುವಂತಾಗಿದೆ ಎಂದು ಗಮನ ಸೆಳೆಯಲಾಯಿತು.
ಶಾಸಕ ಡಿ.ಎಸ್ ಹೂಲಗೇರಿ ಮಾತನಾಡಿ,‘ನಗ ರೋತ್ಥಾನ ಯೋಜನೆಯಡಿ ₹10 ಕೋಟಿ ಅನುದಾನ ಬಿಡುಗಡೆಯಾಗಿದೆ. ಈ ಯೋಜನೆಯ ನಿಯಮಗಳನ್ನು ಆಧರಿಸಿ ಸಾಮೂಹಿಕವಾಗಿ ಕಾಮಗಾರಿ ಕೈಗೆತ್ತಿಕೊಳ್ಳುವುದು ಉತ್ತಮ. ವಾರ್ಡ್ಗೆ ಹಂಚಿಕೆ ಮಾಡುವುದರಿಂದ ಅಭಿವೃದ್ಧಿ ಆಗುವುದಿಲ್ಲ. ಸದಸ್ಯರು ಸಹಕರಿಸಬೇಕು’ ಎಂದು ಕೋರಿದರು.
ಪುರಸಭೆ ಅಧ್ಯಕ್ಷೆ ಸುನಿತಾ ಕೆಂಭಾವಿ, ಉಪಾಧ್ಯಕ್ಷ ಎಂ.ಡಿ.ರಫಿ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಮೋದ ಕುಲಕರ್ಣಿ, ಮುಖ್ಯಾಧಿಕಾರಿ ನರಸಪ್ಪ ತಹಶೀಲ್ದಾರ್ ಸೇರಿದಂತೆ ಪುರಸಭೆ ಸದಸ್ಯರು, ವಿವಿಧ ಪಕ್ಷಗಳ ಮುಖಂಡರು, ಕಾರ್ಯಕರ್ತರು ಇದ್ದರು.