ಲಿಂಗಸುಗೂರು: ತಾಲ್ಲೂಕಿನ ಯರಡೋಣ ಕ್ರಾಸ್ ಸಿದ್ಧರಾಮೇಶ್ವರ ಗುರುಮಠದಲ್ಲಿ ನಡೆಸಿದ ಶ್ರೀದೇವಿ ಮಹಾತ್ಮೆ ಪುರಾಣ ಪ್ರವಚನವನ್ನು ಮಂಗಳವಾರ ಮಹಾಮಂಗಲ ಮಾಡಲಾಯಿತು.
ಶರನ್ನವರಾತ್ರಿ ಅಂಗವಾಗಿ ಒಂಬತ್ತು ದಿನಗಳ ಕಾಲ ಮಹಿಳೆಯರಿಗೆ ಉಡಿ ತುಂಬುವುದು, ದೇವಿಗೆ ವಿಭಿನ್ನ ಅಲಂಕಾರ, ಪ್ರತ್ಯಗಿರದೇವಿ ಹೋಮ ಸೇರಿದಂತೆ ವಿಭಿನ್ನ ಧಾರ್ಮಿಕ ಆಚರಣೆಗಳನ್ನು ನಡೆಸಲಾಯಿತು.
ಮಂಗಳವಾರ ಯರಡೋಣ ಗ್ರಾಮದ ಆರಾಧ್ಯ ದೇವತೆ ಚೌಡೇಶ್ವರಿ ದೇವಸ್ಥಾನದಿಂದ ಮಠದವರೆಗೆ ದೇವಿ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು. ಮಹಿಳೆಯರು ಕಳಸ ಕನ್ನಡಿ ಕುಂಭ ಸಮೇತ ಭಾಗವಹಿಸಿದ್ದರು.
ಡೊಳ್ಳು, ಭಾಜಾ ಭಜಂತ್ರಿ ಮೇಳಗಳು ಮೆರವಣಿಗೆಗೆ ಮೆರಗು ನೀಡಿದ್ದವು. ಸುತ್ತಮುತ್ತಲ ಗ್ರಾಮದ ಭಕ್ತರು ಭಾಗವಹಿಸಿದ್ದರು.
ಶ್ರೀಮಠದ ಮುರುಘೇಂದ್ರ ಶಿವಯೋಗಿಗಳು ಧಾರ್ಮಿಕ ವಿಧಿ ವಿಧಾನಗಳ ನೇತೃತ್ವ ವಹಿಸಿದ್ದರು.