ರಾಯಚೂರು: ಕಾಲರಾ, ಸಾರ್ಸ್, ಡೆಂಗಿಕಾಯಿಲೆಗೆ ಹೋಲಿಸಿದಾಗ ಕೋವಿಡ್–19 ಸೊಂಕಿನಿಂದ ಮೃತಪಟ್ಟವರ ಸಂಖ್ಯೆ ಕಡಿಮೆಯಿದೆ. ಸಾರ್ವಜನಿಕರು ಭಯ ಪಡದೇ ಅಗತ್ಯವಿಲ್ಲ, ಮುನ್ನಚ್ಚರಿಕೆ ಕ್ರಮ ವಹಿಸಿದರೆ ಸಾಕು ಎಂದು ಡಾ.ಸಿ.ಅನಿರುದ್ಧ ಕುಲಕರ್ಣಿ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರೆಡ್ಕ್ರಾಸ್ ಸಂಸ್ಥೆಯಿಂದ ಮಂಗಳವಾರ ಅಯೋಜಿಸಲಾಗಿದ್ದ ಕೋವಿಡ್ 19 (ಕೊರೊನಾ ವೈರಸ್) ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ವಿಶ್ವದಲ್ಲಿ ಸುಮಾರು 760 ಕೋಟಿ ಜನಸಂಖ್ಯೆ ಇದ್ದು, ಇದುವರೆಗೆ ಕೊರೊನಾ ಸೋಂಕು ಪತ್ತೆಯಾಗಿರುವುದು 1.1 ಲಕ್ಷ ಜನರಲ್ಲಿ ಮಾತ್ರ. ಈ ಪೈಕಿ ತೀವ್ರ ಸೋಂಕಿನ ಕಾರಣಕ್ಕೆ 3,816 ಜನ ಮೃತಪಟ್ಟಿದ್ದಾರೆ. ಕೊರೊನಾ ಬಗ್ಗೆ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯ ಭಯ ಸೃಷ್ಟಿಸಲಾಗುತ್ತಿದೆ. ಇದು ಅಂತಹ ಮಾರಕ ಕಾಯಿಲೆಯಲ್ಲ, ಸಾರ್ವಜನಿಕರು ಭಯಪಡುವ ಅವಶ್ಯಕತೆಯಿಲ್ಲ ಎಂದರು.
ಕಾಲೇಜಿನ ಐಕ್ಯೂಎಸಿ ಸಂಚಾಲಕ ಡಾ.ಪ್ರಾಣೇಶ್ ಕುಲಕರ್ಣಿ ಮಾತನಾಡಿ, ಭಾರತದ ಸಂಸ್ಕೃತಿ ಹಾಗೂ ಸಂಪ್ರದಾಯದಲ್ಲಿ ಶುಚಿತ್ವ ಹಾಗೂ ಪರಿಶುದ್ಧತೆಗೆ ಮಹತ್ವ ನೀಡಲಾಗಿದ್ದು ಕುಂಭ ಮೇಳದಂಥ ಮಹಾ ಕಾರ್ಯಕ್ರಮ ನಡೆದರೂ ಯಾವುದೇ ರೋಗ ಹುಟ್ಟಿಕೊಂಡಿಲ್ಲ. ಆದರೆ, ಚೀನಾ ಪ್ರಜೆಗಳು ವಿವಿಧ ಬಗೆಯ ಪ್ರಾಣಿ, ಪಕ್ಷಿ ಹಾಗೂ ಸಿಕ್ಕ ಜೀವಿಗಳನ್ನು ಆಹಾರವಾಗಿ ಸೇವಿಸುವ ಕಾರಣ ಇಂತಹ ಮಾರಕ ಕಾಯಿಲೆ ಹುಟ್ಟಿಕೊಳ್ಳುತ್ತಿದೆ ಎಂದು ಅಭಿಪ್ರಾಯಪಟ್ಟರು.
ಪ್ರಾಚಾರ್ಯ ಡಾ.ದಸ್ತಗೀರ್ ಸಾಬ್ ದಿನ್ನಿ ಅಧ್ಯಕ್ಷತೆ ವಹಿಸಿದ್ದರು. ರೆಡ್ಕ್ರಾಸ್ ಸಂಸ್ಥೆಯ ವಿದ್ಯಾಸಾಗರ್ ಸಿ., ಅತಾವುಲ್ಲಾ, ಪ್ರಾಧ್ಯಾಪಕ ಆರ್.ಮಲ್ಲನಗೌಡ, ಡಾ.ಶಿವಯ್ಯ, ಮಹಾದೇವಪ್ಪ, ಪುಷ್ಪಾ, ಸಪ್ನಾ, ಇಶ್ರತ್ ಬೇಗಂ, ವಿಜಯ್ ಸರೋದೆ, ರಾಮಚಂದ್ರ ಗಬ್ಬೂರು ಇದ್ದರು.