ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತ್ತಿ ಬಿಡಿಸುವ ಕೈಗಳಿಗೆ ರೈತರ ಹುಡುಕಾಟ

Last Updated 28 ನವೆಂಬರ್ 2022, 7:14 IST
ಅಕ್ಷರ ಗಾತ್ರ

ರಾಯಚೂರು: ಬೆಣ್ಣೆ ಮುದ್ದೆಗಳಂತೆ ಕಂಗೊಳಿಸುವ ಹತ್ತಿ ಹೊಲಗಳು ಜಿಲ್ಲೆಯಾದ್ಯಂತ ಕಣ್ಸೆಳೆಯುತ್ತಿವೆ.‌ ಬಿರಿದುಕೊಂಡ ಈ ಹತ್ತಿಯನ್ನು ಮಾರುಕಟ್ಟೆಗೆ ತರಲು ರೈತರು ಕಾತುರದಿಂದ ಕಾಯುತ್ತಿದ್ದಾರೆ. ಆದರೆ, ಹತ್ತಿ ಬಿಡಿಸಿಕೊಡಲು ಸಕಾಲಕ್ಕೆ ಕೈಗಳು ದೊರೆಯುತ್ತಿಲ್ಲ.

ಹತ್ತಿ ಬಿಡಿಸುವ ಕೃಷಿ ಕಾರ್ಮಿಕರಿಗಾಗಿ ರೈತರು ಸರದಿಯಲ್ಲಿ ಕಾಯುವ ಸ್ಥಿತಿ ಇದೆ. ಮಾರುಕಟ್ಟೆಗೆ ಬೇಗನೆ ಹತ್ತಿ ಮಾರಾಟ ಮಾಡಬೇಕೆಂದರೂ ರೈತರಿಗೆ ಸಾಧ್ಯವಾಗುತ್ತಿಲ್ಲ. ಸ್ಥಳೀಯ ಕಾರ್ಮಿಕರು ದೂರದ ಊರುಗಳಿಗೆ ಕೃಷಿಕಾರ್ಯಗಳಿಗೆ ತೆರಳುತ್ತಿದ್ದಾರೆ. ಹೀಗಾಗಿ ಹತ್ತಿ ಬಿಡಿಸುವ ಕಾರ್ಮಿಕರನ್ನು ದೂರದ ಊರುಗಳಿಂದ ಕರೆತರುವುದು ರೈತರಿಗೆ ಅನಿವಾರ್ಯವಾಗಿದೆ. ಎಲ್ಲಿ ಕಾರ್ಮಿಕರು ಬರಲು ಸಿದ್ಧರಿದ್ದಾರೆ ಎಂದು ಹುಡುಕಲು ಅಲೆದಾಡಬೇಕಾಗಿದೆ.

ರಾಯಚೂರು ತಾಲ್ಲೂಕಿನ ಅರಿಷಿಣಗಿ, ಮೀರಾಪುರ, ಕಾಡ್ಲೂರು ಸೇರಿದಂತೆ ದೇವದುರ್ಗ, ಮಾನ್ವಿ ತಾಲ್ಲೂಕುಗಳ ಅನೇಕ‌ ಗ್ರಾಮಗಳ ರೈತರು ನೆರೆಯ ಆಂಧ್ರಪ್ರದೇಶ ರಾಜ್ಯದ ಜಿಲ್ಲೆಗಳ ಕಾರ್ಮಿಕರನ್ನು ಕರೆತರುತ್ತಿದ್ದಾರೆ. ಎಡಬಿಡದೆ ಕೈತುಂಬ ಕೆಲಸ ಸಿಗುತ್ತದೆ ಎಂದು ನೆರೆ ರಾಜ್ಯಗಳ ಕೃಷಿ ಕಾರ್ಮಿಕರು ಕುಟುಂಬ ಸಮೇತ ರಾಯಚೂರು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಗುಡಿಸಲು ಹಾಕಿಕೊಂಡು ಬೀಡುಬಿಟ್ಟಿದ್ದಾರೆ. ಇದಲ್ಲದೆ, ಪಿಕಪ್ ವಾಹನಗಳಲ್ಲಿಯೂ ಗುಂಪುಗುಂಪಾಗಿ ಹತ್ತಿ‌ಬಿಡಿಸುವ ಕಾರ್ಮಿಕರು ಹೊರರಾಜ್ಯಗಳಿಂದ‌‌‌ ಬಂದು ಹೋಗುತ್ತಿದ್ದಾರೆ.

ಬೆಳಿಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆವರೆಗೂ ಹಾಜರಿ ಲೆಕ್ಕದಲ್ಲಿ ಹತ್ತಿ ಬಿಡಿಸುವುದಕ್ಕೆ ಒಬ್ಬ ಕಾರ್ಮಿಕರಿಗೆ ₹300 ಕೊಡಬೇಕು. ಇದಲ್ಲದೆ, ಒಂದು ಕೆಜಿ ಹತ್ತಿ ಬಿಡಿಸಲು ₹12 ರಿಂದ ₹14 ಕರಾರು ಮಾಡುವ ರೂಢಿ ಇದೆ. ಈ ರೀತಿ ಕರಾರು ಮಾಡಿದಾಗ ಕಾರ್ಮಿಕರು ಹೆಚ್ಚು ಪರಿಶ್ರಮ ವಹಿಸಿ ಗರಿಷ್ಠ ದಿನಕ್ಕೆ‌ 80 ಕೆಜಿವರೆಗೂ ಹತ್ತಿ‌ ಬಿಡಿಸುತ್ತಾರೆ. ಇದರಿಂದ ಒಬ್ಬ ಕಾರ್ಮಿಕರು ₹800 ವರೆಗೂ‌ ಕೂಲಿ ಪಡೆಯುತ್ತಾರೆ. ದೂರದ ಊರುಗಳಿಂದ ಕಾರ್ಮಿಕರನ್ನು ಕರೆತರಲು ವಾಹನಕ್ಕೆ ಹೆಚ್ಚುವರಿ ವೆಚ್ಚವನ್ನು ರೈತರೇ ಭರಿಸಬೇಕು.

ಸದ್ಯ ಹತ್ತಿ‌ಬಿಡಿಸುವ ಕಾರ್ಮಿಕರಿಗೆ ಬೇಡಿಕೆ ಹೆಚ್ಚಾಗಿದೆ. ಅಲ್ಲದೆ ಕೈತುಂಬ ಕೆಲಸ ಮಾಡುವುದಕ್ಕೆ ಇದೇ ಅವಕಾಶವೂ ಆಗಿದೆ.

ಕೂಲಿಗೆ ತಕ್ಕ ಕೆಲಸ: ಸಿರವಾರ: ಹತ್ತಿ ಬಿಡಿಸುವ ಕೆಲಸವು ಕೊನೆಯ ಹಂತಕ್ಕೆ ಬಂದಿದ್ದು, ಅಗತ್ಯಕ್ಕೆ ತಕ್ಕಂತೆ ಕೂಲಿಕಾರರು ಲಭ್ಯರಾಗುತ್ತಿದ್ದಾರೆ. ಆದರೆರೈತನ ಜೇಬಿಗೆ ಮಾತ್ರ ಕತ್ತರಿ ಬೀಳುತ್ತಿದೆ. ಪ್ರತಿ ಗ್ರಾಮದಿಂದಲೂ ವಾಹನ ಮಾಲೀಕ ಎಲ್ಲಿಗೆ ಕರೆದ್ಯೊಯ್ಯುತ್ತಾನೋ ಅಲ್ಲಿಗೆ ಕೆಲಸಕ್ಕೆ ಹೋಗುತ್ತಾರೆ.

ದಿನಕೂಲಿ ಕೆಲಸವಾದರೆ ಬೆಳಿಗ್ಗೆ ಹತ್ತು ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಹತ್ತಿ ಬಿಡಿಸುತ್ತಾರೆ. ಅದೂ ಒಬ್ಬ ಹೆಚ್ಚು ಎಂದರೆ 15 ರಿಂದ 20 ಕೆಜಿಯವರೆಗೆ ಹತ್ತಿ ಬಿಡಿಸುತ್ತಾರೆ. ಕೂಲಿ ₹200 ಮತ್ತು ವಾಹನ ಬಾಡಿಗೆ ₹50 ಕೊಡಬೇಕು.

ಆದೇ ಕೆಜಿ ಲೆಕ್ಕದಲ್ಲಿ ಬಿಡಿಸಿದರೆ ಕೂಲಿಕಾರರು ಬೆಳಿಗ್ಗೆ 7 ರಿಂದ 8 ಗಂಟೆಯೊಳಗೆ ಕೆಲಸಕ್ಕೆ ತೆರಳುತ್ತಾರೆ. ಸಂಜೆ 6 ಗಂಟೆವರೆಗೂ ಕೆಲಸ ಮಾಡುತ್ತಾರೆ. ಒಬ್ಬರು ಸುಮಾರು 40 ಕೆಜಿ ಯಿಂದ 70 ಕೆಜಿಯವರೆಗೂ ಅವರವರ ಶಕ್ತಿಯ ಅನುಸಾರ ಹತ್ತಿ ಬಿಡಿಸುತ್ತಾರೆ.

ಒಂದು ಕೆಜಿ ಬಿಡಿಸಲು ₹10 ರಿಂದ ₹12 ಕೂಲಿ ಪಡೆಯುತ್ತಾರೆ. ಇದರಲ್ಲಿ ವಾಹನ ಮಾಲೀಕರಿಗೆ ₹2 ಕಮಿಷನ್ ದೊರೆಯುತ್ತದೆ ಎಂದು ವಾಹನ ಮಾಲೀಕರು ಹೇಳುತ್ತಾರೆ. ಪಟ್ಟಣದ ಇಂದಿರಾನಗರದ ಹುಸೇನಮ್ಮ ಎಂಬ ಮಹಿಳೆಯು ಒಂದು ದಿನ 110 ಕೆಜಿ ಹತ್ತಿ ಬಿಡಿಸಿ ಸಾಧನೆ ಮಾಡಿದ್ದಾರೆ.

ವಲಸೆ ಕಾರ್ಮಿಕರ ಅವಲಂಬನೆ

ಮಾನ್ವಿ:ತಾಲ್ಲೂಕಿನಲ್ಲಿ ಗ್ರಾಮೀಣ ಭಾಗದ ಬಡ ಮಹಿಳೆಯರು, ಕೂಲಿಕಾರ್ಮಿಕರು ನಗರ ಪ್ರದೇಶಗಳಿಗ ಗುಳೆ ಹೋಗಿರುವುದು ಸ್ಥಳೀಯ ಕೃಷಿ ಚಟುವಟಿಕೆಗಳಿಗೆ ಕೂಲಿಕಾರ್ಮಿಕರ ಕೊರತೆ ಉಂಟಾಗಿದೆ.

ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಹತ್ತಿ ಬಿಡಿಸುವ ಕಾರ್ಯ ಭರದಿಂದ ಸಾಗಿದ್ದು ಹತ್ತಿ ಬೆಳೆಗಾರರಿಗೆ ಸಿಂಧನೂರು, ಮಸ್ಕಿ ತಾಲ್ಲೂಕಿನ ಗ್ರಾಮಗಳ ಕೂಲಿಕಾರ್ಮಿಕರು ಆಸರೆಯಾಗಿದ್ದಾರೆ. ತುಂಗಭದ್ರಾ ಎಡದಂಡೆ ನಾಲೆಯ ವ್ಯಾಪ್ತಿಯ ಮೇಲ್ಭಾಗದ ಸಿಂಧನೂರು, ಮಸ್ಕಿ ತಾಲ್ಲೂಕುಗಳಲ್ಲಿ ಭತ್ತ ಬೆಳೆಯಲು ಆದ್ಯತೆ ನೀಡಲಾಗುತ್ತದೆ. ಈ ತಾಲ್ಲೂಕುಗಳಲ್ಲಿ ಪ್ರಸ್ತುತ ಭತ್ತ ಕಟಾವು ಮುಗಿದಿರುವ ಕಾರಣ ದುಡಿಮೆ ಇಲ್ಲದೆ ಕೂಲಿಕಾರ್ಮಿಕರು ಮಾನ್ವಿ, ಸಿರವಾರಗಳತ್ತ ಮುಖ ಮಾಡಿದ್ದಾರೆ.

ಪ್ರತಿದಿನ ಬೆಳಿಗ್ಗೆ ಟಂ ಟಂ ವಾಹನಗಳಲ್ಲಿ ಬರುವ ಕಾರ್ಮಿಕರು ಸಂಜೆಯ ಹೊತ್ತಿಗೆ ಸ್ವಗ್ರಾಮಗಳಿಗೆ ಮರಳುತ್ತಾರೆ. ಹತ್ತಿ ಬಿಡಿಸುವ ಕಾರ್ಯದಲ್ಲಿ ಪ್ರತಿ ಒಂದು ಕೆಜಿ ಹತ್ತಿ ಬಿಡಿಸಲು ₹11ರಿಂದ ₹13ರವರೆಗೆ ಕೂಲಿ ಅಥವಾ ಒಂದು ದಿನಕ್ಕೆ ಒಬ್ಬರಿಗೆ ಕೂಲಿ ₹250-₹300 ನೀಡಲಾಗುತ್ತದೆ. ಕೂಲಿಕಾರ್ಮಿಕರನ್ನು ಕರೆ ತರುವ ವಾಹನದ ಬಾಡಿಗೆ ವೆಚ್ಚವನ್ನು ಜಮೀನಿನ ಮಾಲೀಕರು ನೀಡುತ್ತಾರೆ.

ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆಯ ಸಮಯದಲ್ಲಿ ರಾಯಚೂರು-ಸಿಂಧನೂರು ರಾಜ್ಯ ಹೆದ್ದಾರಿಯಲ್ಲಿ ಕೂಲಿಕಾರ್ಮಿಕರನ್ನು ಹೊಂದಿರುವ ಟಂಟಂ ವಾಹನಗಳು ಅಧಿಕ ಸಂಖ್ಯೆಯಲ್ಲಿ ಕಂಡು ಬರುವುದು ಸಾಮಾನ್ಯವಾಗಿದೆ.

ಹತ್ತಿ ಬಿಡಿಸಲು ಮಹಿಳೆಯರ ಪಯಣ

ಸಿಂಧನೂರು: ತಾಲ್ಲೂಕಿನ ಗ್ರಾಮೀಣ ಪ್ರದೇಶಗಳ ಕೃಷಿ ಕೂಲಿ ಕಾರ್ಮಿಕ ಮಹಿಳೆಯರು ಹತ್ತಿ ಬಿಡಿಸಲು ಬೇರೆ ತಾಲ್ಲೂಕುಗಳಿಗೆ ತೆರಳುತ್ತಿರುವುದು ಸರ್ವೆ ಸಾಮಾನ್ಯವಾಗಿದೆ.

ತಾಲ್ಲೂಕು ವ್ಯಾಪ್ತಿಯಲ್ಲಿ ಭತ್ತ ಹಾಗೂ ಜೋಳದ ಬೆಳೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆದಿದ್ದು, ಭತ್ತ ಈಗಾಗಲೇ ಕಟಾವ್ಕಾರ್ಯ ಆರಂಭಗೊಂಡಿದೆ. ಅಲ್ಪ ಪ್ರಮಾಣದಲ್ಲಿ ಹತ್ತಿ ಬೆಳೆಯಲಾಗಿದೆ. ಆದರೆ ಪಕ್ಕದ ಮಾನ್ವಿ, ಸಿರಗುಪ್ಪ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹತ್ತಿ ಬೆಳೆಯಲಾಗಿದೆ. ತಾಲ್ಲೂಕಿನ ವಿವಿಧ ಗ್ರಾಮಗಳ ಕೃಷಿ ಕೂಲಿ ಕಾರ್ಮಿಕ ಮಹಿಳೆಯರನ್ನು ಬುಲೇರಾ ಗೂಡ್ಸ್ವಾಹನಗಳಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚಿಗೆ ಜನರನ್ನು ಕರೆದುಕೊಂಡು ಹೋಗುತ್ತಿದ್ದಾರೆ.

ಕೆಜಿ ಹತ್ತಿ ಬಿಡಿಸಲು ₹10 ರಿಂದ ₹12 ನೀಡುತ್ತಿದ್ದು, ದಿನಕ್ಕೆ ಒಬ್ಬರು 30 ರಿಂದ 40 ಕೆಜಿ ಬಿಡಿಸಿ ₹400 ಯಿಂದ ₹500 ಕೂಲಿ ದುಡಿಯುತ್ತಿದ್ದಾರೆ. ದಿನದಿಂದ ದಿನಕ್ಕೆ ಹತ್ತಿ ಬಿಡಿಸಲು ಕಾರ್ಮಿಕ ಮಹಿಳೆಯರನ್ನು ಕರೆದುಕೊಂಡು ಹೋಗುವ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತಿದೆ.

‘ಕೃಷಿ ಕೂಲಿಕಾರ್ಮಿಕ ಮಹಿಳೆಯರು ಬೇರೆಡೆಗೆ ಹತ್ತಿ ಬಿಡಿಸಲು ತೆರಳುತ್ತಿದ್ದು, ತಾಲ್ಲೂಕಿನಲ್ಲಿ ಬೆಳೆದ ಹತ್ತಿ ಬಿಡಿಸಲು ಕಾರ್ಮಿಕರು ಸಿಗದಂತಾಗಿದೆ. ಕೆಲವರು ಕೆಜಿ ಹತ್ತಿ ಬಿಡಿಸಲು ₹ 12 ತೆಗೆದುಕೊಂಡರೆ, ಇನ್ನು ಕೆಲವರು ₹300 ರಿಂದ₹400 ರವರೆಗೆ ಕೂಲಿ ಪಡೆದು ಕೆಲಸ ಮಾಡುತ್ತಿದ್ದಾರೆ’ ಎಂದು ಶ್ರೀನಿವಾಸ ಬಾದರ್ಲಿ ಹಾಗೂ ಪಾಡುರಂಗ ಆಯನೂರು ತಿಳಿಸಿದರು.

ಕಾರ್ಮಿಕರಿಗೆ ಹೆಚ್ಚಿದ ಬೇಡಿಕೆ

ದೇವದುರ್ಗ: ತಾಲ್ಲೂಕಿನಾದ್ಯಂತ ಕೂಲಿ ಕಾರ್ಮಿಕರಿಗೆ ಬಾರಿ ಬೇಡಿಕೆ ಹೆಚ್ಚಾಗುತ್ತಿದೆ. ಹತ್ತಿ ಬಿಡಿಸುವ ಕಾರ್ಯ ಬರದಿಂದ ಸಾಗಿದ್ದು ಪ್ರಥಮ ಬಿಡಿ ಬಿಡಿಸುವ ವೇಳೆ ಇದ್ದ ಕೂಲಿಗಿಂತ ಎರಡನೇ ಬಿಡಿ ಹತ್ತಿ ಬಿಡಿಸುವ ಕೂಲಿಕಾರ್ಮಿಕರಿಗೆ ಹೆಚ್ಚಿನ ಕೂಲಿ ಸಿಗುತ್ತಿದೆ.

ಒಂದು ದಿನಕ್ಕೆ ₹300 ಕೂಲಿ ಸಿಗುತ್ತದೆ. ಆದರೆ ಕೂಲಿ ಬದಲಿಗೆ ಕೆಜಿ ಲೆಕ್ಕಾಚಾರದಲ್ಲಿ ಹತ್ತಿ ಬಿಡಿಸುವ ಕಾರ್ಯದಲ್ಲಿ ಕೂಲಿ ಕಾರ್ಮಿಕರು ತೊಡಗಿದ್ದಾರೆ. ಪ್ರತಿಯೊಬ್ಬ ಕೂಲಿ ಕಾರ್ಮಿಕರು ಒಂದು ದಿನಕ್ಕೆ ₹10 ಕೆಜಿ ಯಂತೆ ಸುಮಾರು 70 ರಿಂದ ₹80 ಕೆಜಿ ಪ್ರತಿದಿನ ಹತ್ತಿ ಬಿಡಿಸುತ್ತಾರೆ. ಅಂದರೆ ಕಾರ್ಮಿಕರು ಒಂದು ದಿನಕ್ಕೆ ₹800 ರಿಂದ ₹900 ಒಂದು ದಿನಕ್ಕೆ ಕೂಲಿ ಪಡೆಯುತ್ತಿದ್ದಾರೆ.

ಮೆಣಸಿನಕಾಯಿ ಬೆಳೆ ಇನ್ನೂ ಬಾರದ ಹಿನ್ನೆಲೆ ಮತ್ತು ಭತ್ತದ ಬೆಳೆಯನ್ನು ಯಂತ್ರದ ಮೂಲಕ ಕಟಾವು ಮಾಡುವುದರಿಂದ ಹತ್ತಿ ಬಿಡಿಸುವ ಕಾರ್ಮಿಕರ ಲಭ್ಯವಿದೆ. ಆದರೆ ಕೂಲಿಯವರದ್ದೇ ಡಿಮ್ಯಾಂಡ್ ಎನ್ನುತ್ತಾರೆ ರೈತ ಮಲ್ಲಪ್ಪ.

ಕಳೆದ ವರ್ಷದಂತೆ ಈ ವರ್ಷವೂ ಉತ್ತಮ ಬೆಲೆ ಇರುವುದರಿಂದ ಎಲ್ಲಾ ರೈತರು ಉತ್ತಮ ಇಳುವರಿಯ ವಿಶ್ವಾಸದಲ್ಲಿದ್ದಾರೆ. ಆದರೆ ಕೂಲಿ ಕಾರ್ಮಿಕರ ಕೆಜಿ ಲೆಕ್ಕಚಾರ ರೈತರಿಗೆ ಆರ್ಥಿಕ ಹೊರೆಯಾಗುತ್ತಿದೆ.

ಗುಳೆ ಸಮಸ್ಯೆ: ರಾಯಚೂರು, ದೇವದುರ್ಗ, ಮಾನ್ವಿ, ಮಸ್ಕಿ, ಸಿರವಾರ ಹಾಗೂ ಲಿಂಗಸುಗೂರು ತಾಲ್ಲೂಕುಗಳಿಂದ ಅತಿಹೆಚ್ಚು ಕೃಷಿ ಕಾರ್ಮಿಕರು ಮಹಾನಗರಗಳಿಗೆ ಗುಳೆ ಹೋಗುವುದು ಸಾಮಾನ್ಯವಾಗಿದೆ. ಇದೇ ಕಾರಣದಿಂದ ರೈತರಿಗೆ ಸ್ಥಳೀಯವಾಗಿ ಹತ್ತಿ ಬಿಡಿಸುವುದಕ್ಕೆ ಕಾರ್ಮಿಕರು ದೊರೆಯುತ್ತಿಲ್ಲ. ಹೆಚ್ಚುವರಿ ಖರ್ಚು ಮಾಡಿಕೊಂಡು ದೂರದ ಊರುಗಳಿಂದಲೇ ಕಾರ್ಮಿಕರನ್ನು ಕರೆತರಬೇಕಾಗಿದೆ.

ಬಾಲಕಾರ್ಮಿಕರು: ಇದು ಹತ್ತಿ ಬಿಡಿಸುವ ಹಂಗಾಮು ಆಗಿರುವುದರಿಂದ ಅನೇಕ ಕಡೆಗಳಲ್ಲಿ ಪಾಲಕರು ಶಾಲಾ ಮಕ್ಕಳನ್ನು ಕೂಡಾ ಹತ್ತಿ ಬಿಡಿಸುವ ಕೂಲಿ ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ. ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಘಟಕದವರು ವಿವಿಧೆಡೆ ದಾಳಿ ನಡೆಸಿ, ಮಕ್ಕಳನ್ನು ರಕ್ಷಿಸುತ್ತಿದ್ದಾರೆ. ಆದರೂ ಸಂಪೂರ್ಣ ಬಾಲಕಾರ್ಮಿಕ ಪದ್ಧತಿ ತಡೆಯುವುದಕ್ಕೆ ಸಾಧ್ಯವಾಗಿಲ್ಲ. ಪಿಕ್‌ಅಪ್‌ ವಾಹನಗಳಲ್ಲೇ ರಾಜಾರೋಷವಾಗಿ ಬಾಲಕರನ್ನು ತುಂಬಿಸಿಕೊಂಡು ಸಂಚರಿಸುವ ದೃಶ್ಯಗಳು ಕಣ್ಣಿಗೆ ಬೀಳುತ್ತಿವೆ.

ಪೂರಕ ವರದಿಗಳು: ಬಸವರಾಜ ಭೋಗಾವತಿ, ಡಿ.ಎಚ್‌.ಕಂಬಳಿ, ಕೃಷ್ಣಾ ಪಿ., ಯಮನೇಶ ಗೌಡಗೇರಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT