ರಾಯಚೂರು: ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಜೋಳದಹೆಡಗಿ ಬಳಿ ಕೃಷ್ಣಾನದಿಯಲ್ಲಿ ನಿಯಮ ಉಲ್ಲಂಘಿಸಿ ಮರಳು ಗಣಿಗಾರಿಕೆ ಮಾಡಲಾಗುತ್ತಿದೆ ಎಂದು ಆರ್ಟಿಐ ಕಾರ್ಯಕರ್ತ ಶರಣಪ್ಪರೆಡ್ಡಿ ಅವರು ನೀಡಿದ್ದ ದೂರು ಆಧರಿಸಿದೇವದುರ್ಗ ಠಾಣೆ ಪೊಲೀಸರು, ಜಿಲ್ಲಾ ಗಣಿ ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ವಿಶ್ವನಾಥ ಸೇರಿ ಇಬ್ಬರು ಗುತ್ತಿಗೆದಾರರ ವಿರುದ್ಧ ಗುರುವಾರ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಹಸಿರು ಪ್ರಾಧಿಕಾರದ ನಿಯಮಗಳನ್ವಯ ಮೂರು ಮೀಟರ್ ಆಳಕ್ಕೆ ಗಣಿಗಾರಿಕೆ ನಡೆಸಬೇಕು. ಆದರೆ, ಗುತ್ತಿಗೆದಾರರಾದ ಆನಂದ ದೊಡ್ಡಮನಿ, ಪಿ.ಎಲ್.ಕಾಂಬಳೆ ಅವರು ಜೋಳದಹೆಡಗಿ ನದಿಪಾತ್ರದ ಬ್ಲಾಕ್–2 ರಲ್ಲಿ ಗಣಿ ಗುತ್ತಿಗೆದಾರರು 7 ಅಡಿ ಆಳದವರೆಗೂ ಗಣಿಗಾರಿಕೆ ಮಾಡಿದ್ದಾರೆ.
ಬೆಳಿಗ್ಗೆ 6 ರಿಂದ ಸಂಜೆ 6ರವರೆಗೂ ಗಣಿಗಾರಿಕೆ ಸಮಯಾವಕಾಶ ಇದ್ದರೂ ಅಹೋರಾತ್ರಿ ಗಣಿಗಾರಿಕೆ ನಡೆಯುತ್ತಿದೆ. ಪರಿಸರ ಇಲಾಖೆಯಿಂದ ಪರವಾನಿಗೆ ಪಡೆದಿಲ್ಲ. ನದಿಪಾತ್ರದಲ್ಲಿ ಯಂತ್ರ ಬಳಸಬಾರದು ಎನ್ನುವ ನಿಯಮಗಳಿದ್ದರೂ ನದಿಯೊಳಗೆ ಇಟಾಚಿ ಹಾಕಲಾಗಿದೆ. 14 ಟನ್ ಮರಳಿನ ರಾಯಲ್ಟಿ ನೀಡಿ, 45 ಟನ್ ಮರಳು ಸಾಗಣೆ ನಡೆದಿದೆ. ನದಿಯೊಳಗೆ 12.5 ಎಕರೆ ಗುತ್ತಿಗೆ ಇದ್ದರೂ 50 ಎಕರೆವರೆಗೂ ಮರಳು ತೆಗೆಯಲಾಗುತ್ತಿದೆ. ಮೇಲುಸ್ತುವಾರಿ ಮಾಡಬೇಕಿದ್ದ ವಿಜ್ಞಾನಿಯಿಂದಾಗಿ ಸರ್ಕಾರಕ್ಕೆ ಭಾರಿ ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿರುವ ಅಂಶಗಳನ್ನು ಆಧರಿಸಿ ಎಫ್ಐಆರ್ ಮಾಡಲಾಗಿದೆ.
‘ದೂರು ಪಡೆದು ಎಫ್ಐಆರ್ ದಾಖಲಿಸಲಾಗಿದೆ. ಸಾಕ್ಷಿಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದರು.