ರಾಯಚೂರು: ನರೇಗಾ ಯೋಜನೆಯಡಿ ಗುಣಮಟ್ಟದ ಕಾಮಗಾರಿಗಳನ್ನು ದಾಖಲೀಕರಣ ಮಾಡಬೇಕು. ಉದ್ಯೋಗ ಚೀಟಿಗಳು ಇಲ್ಲದ ಕುಟುಂಬಗಳನ್ನು ಗುರುತಿಸಿ ಅವರಿಗೆ ಹೊಸ ಉದ್ಯೋಗ ಚೀಟಿಗಳನ್ನು ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಪ್ರಕಾಶ ವಿ. ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಂಭಾಗಣದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಜಲ ಸಂಜೀವಿನಿ ಕಾರ್ಯಕ್ರಮದಡಿ ಜಿಪಿಎಎಸ್ (ಗ್ರಾಮ ಪರಿಸರ ಅಭಿವೃದ್ಧಿ ಸಮಿತಿ) ಹಾಗೂ ಸಿಎಲ್ಎಮ್ (ಕಾಮನ್ ಲ್ಯಾಂಡ್ ಮ್ಯಾಪಿಂಗ್) ಮತ್ತು ಗ್ರಾಮ ಪಂಚಾಯಿತಿ ಆಸೆಟ್ ರಿಜಿಸ್ಟರ್ನಲ್ಲಿ ಸಾಮೂಹಿಕ ಆಸ್ತಿ ಮಾಹಿತಿ ದಾಖಲೀಕರಣ ಮಾಡುವ ಕುರಿತು ಒಂದು ದಿನದ ತರಬೇತಿ ಕಾರ್ಯಗಾರ, ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.
‘ದುರ್ಬಲ ವರ್ಗದವರಿಗೆ ನರೇಗಾ ಯೋಜನೆಯ ಸೌಲಭ್ಯಗಳನ್ನು ನೀಡುವ ಕೆಲಸವಾಗಬೇಕು. ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಎಫ್ಟಿ, ಜಿಕೆಎಂ ಹಾಗೂ ತಾಂಡಾ ರೋಜಗಾರ ಮಿತ್ರರಿಗೆ ಅಗತ್ಯ ಸಲಹೆ ಸೂಚನೆ ನೀಡಿ ಎನ್ಎಂಎಂಎಸ್ ಹಾಜರಾತಿ, ಕಾಮಗಾರಿ ಕಡತ/ಏಳು ವಹಿಗಳ ಕಡತಗಳ ನಿರ್ವಹಣೆ, ನಮೂನೆ 6ರ ಅರ್ಜಿ ಸಲ್ಲಿಕೆ, ಜನಗಣತಿ, ಎಸ್ಸಿ, ಎಸ್ಟಿ, ಮಹಿಳಾ ಕೂಲಿಕಾರರ ಮಾಹಿತಿಗಳನ್ನು ತಿಳಿದುಕೊಂಡಿರಬೇಕು’ ಎಂದರು.
ಮನೆ ಮನೆಗೆ ಭೇಟಿ ನೀಡಿ ನರೇಗಾದಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಗ್ರಾಮಸ್ಥರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಕೂಲಿಕಾರರಿಗೆ ಅಳತೆಗೆ ತಕ್ಕಂತೆ ಕೂಲಿ ಮೊತ್ತ ಪಾವತಿಯಾಗುವ ವಿವರವನ್ನು ತಿಳಿಸಬೇಕು. 177 ಗ್ರಾಮ ಪಂಚಾಯಿತಿಗಳಲ್ಲಿ ಶಿಶುಪಾಲನಾ ಕೇಂದ್ರವನ್ನು ಸ್ಥಾಪಿಸಲು ಸೂಕ್ತವಾದ ಕಟ್ಟಡಗಳನ್ನು ಗುರುತಿಸುವುದು, ಮತ್ತು ಮಕ್ಕಳ ಕಾಳಜಿವಹಿಸಲು ಪ್ರತಿಯೊಂದು ಕೇಂದ್ರಕ್ಕೆ 9ರಿಂದ 10 ಮಹಿಳಾ ಕೂಲಿಕಾರರನ್ನು ಆಯ್ಕೆ ಮಾಡಲು ಸೂಚಿಸಿದರು.
ಸ್ವಸಹಾಯ ಸಂಘದ ಮಹಿಳೆಯರಿಗೆ ನರೇಗಾ ಯೋಜನೆಯಲ್ಲಿ ಉದ್ಯೋಗ ಚೀಟಿಗಳನ್ನು ನೀಡಿದರೆ ಅವರಿಗೂ ಅದರಲ್ಲಿ ಆದಾಯ ಬರುತ್ತದೆ. ಇದರಿಂದ ಕುಟುಂಬಕ್ಕೆ ಶಕ್ತಿ ತುಂಬಿದಂತೆಯಾಗುವುದು ಎಂದರು.
ಸ್ವಚ್ಛ ಸರ್ವೇಕ್ಷಣಾ ಅಭಿಯಾನವನ್ನು ಕೈಗೊಂಡು ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಲು ಬಿಎಫ್ಟಿ, ಜಿಕೆಎಂ ಹಾಗೂ ತಾಂಡಾ ರೋಜಗಾರ ಮಿತ್ರರಿಗೆ ಸೂಚಿಸಿದರು.
ಜಿಲ್ಲಾ ಸಹಾಯಕ ಸಮನ್ವಯ ಅಧಿಕಾರಿ, ಅಕೌಂಟ್ ಮ್ಯಾನೇಜರ್, ಐಇಸಿ ಸಂಯೋಜಕರು ಮತ್ತು ಕಚೇರಿ ಸಿಬ್ಬಂದಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.