ಹಟ್ಟಿಚಿನ್ನದಗಣಿ: ಹಟ್ಟಿ ಸುತ್ತಮುತ್ತಲ ಪ್ರದೇಶದಲ್ಲಿ ಪ್ರಾಣಿಗಳನ್ನು ಬೇಟೆಯಾಡುವವರ ಸಂಖ್ಯೆ ಹೆಚ್ಚುತ್ತಿದೆ. ಪವನ ವಿದ್ಯುತ್ ಶಕ್ತಿಯ ಫ್ಯಾನ್ಗಳು ಸಹ ಪ್ರಾಣಿಗಳಿಗೆ ಕಂಟಕವಾಗಿ ಪರಿಣಮಿಸಿವೆ.
ಗೋಲಪಲ್ಲಿ, ಯರಜಂತಿ, ಯಲಗಟ್ಟಾ, ಆನ್ವರಿ, ಚಿಕ್ಕ ಹೆಸರೂರು, ಹಿರೇಹೆಸರೂರು ಸೇರಿ ವಿವಿಧ ಗ್ರಾಮಗಳಲ್ಲಿ ಸಾವಿರಾರು ಎಕರೆ ಪ್ರದೇಶದ ಕಾಯ್ದಿಟ್ಟ ಹಾಗೂ ಮೀಸಲು ಅರಣ್ಯ ಪ್ರದೇಶವಿದೆ.
ಮಾಚನೂರು, ವಂದಲಿ ವಸೂರು, ಗುರುಗುಂಟಾ ಕೆರೆ ಹಾಗೂ ಕೃಷ್ಣಾನದಿ ಪ್ರದೇಶದಲ್ಲಿ ಹಲವು ಬಗೆಯ ಬಾತುಕೋಳಿ, ಕೊಕ್ಕರೆ, ಬೆಳ್ಳಕ್ಕಿ ಸೇರಿ ವಿಶಿಷ್ಟ ಬಗೆಯ ಪಕ್ಷಿಗಳಿವೆ. ಜಿಂಕೆ, ಮೊಲದಂಥ ಪ್ರಾಣಿಗಳನ್ನು ಬೇಟೆಗಾರರು ರಾತ್ರೋ ರಾತ್ರಿ ಬಡಿದು ಕೊಲ್ಲುತ್ತಿದ್ದಾರೆ. ನಾಯಿಗಳನ್ನು ಬಳಸಿ ಉಡ ಬೇಟೆಯಾಡುತ್ತಾರೆ. ಬಲೆಗಳ ಸಹಾಯದಿಂದ ಕೌಜುಗ, ಬುರ್ಲಿಯಂಥ ಪಕ್ಷಿಗಳನ್ನು ಬೇಟೆಯಾಡುತ್ತಿದ್ದಾರೆ ಎಂದು ಜನ ದೂರುತ್ತಾರೆ.
ಉರುಳು ಹಾಕಿ ನೀರಿನಲ್ಲಿ ವಾಸಿಸುವ ಪಕ್ಷಿಗಳನ್ನು ಹಿಡಿಯುತ್ತಿದ್ದಾರೆ. ಪವನ ವಿದ್ಯುತ್ ಉತ್ಪಾದಿಸುವ ಫ್ಯಾನ್ಗಳ ಭಾರಿ ಸದ್ದಿಗೆ ಪ್ರಾಣಿಗಳು ಕಪ್ಪು ನೆಲದ ಕೃಷಿ ಭೂಮಿಯ ಕಡೆ ವಲಸೆ ಹೋಗುತ್ತಿವೆ. ಬೇಟೆಗೆ ಕಡಿವಾಣ ಹಾಕಿ ಪ್ರಾಣಿ ಸಂಪತ್ತನ್ನು ಉಳಿಸ ಬೇಕಾಗಿದೆ ಎಂದು ಜನ ಒತ್ತಾಯಿಸುತ್ತಾರೆ.