ರಾಯಚೂರು: ರೈತರು ಕಷ್ಟಪಟ್ಟು ಬೆಳೆದಿರುವ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ರಾಯಚೂರು ಎಪಿಎಂಸಿಗೆ ತೆಗೆದುಕೊಂಡು ಬಂದಿದ್ದು ಮಳೆನೀರಿನಿಂದ ನಾಶವಾಗಿ ಸಂಕಷ್ಟ ಅನುಭವಿಸುತ್ತಿರುವುದು ಪ್ರತಿವರ್ಷ ಮರುಕಳಿಸುತ್ತಿದೆ. ಆದರೆ, ಅಧಿಕಾರಿಗಳು ಇದುವರೆಗೂ ಶಾಶ್ವತ ಪರಿಹಾರ ಕ್ರಮಕ್ಕೆ ಮುಂದಾಗಿಲ್ಲ.
ಸೋಮವಾರ ಅರ್ಧಗಂಟೆ ಸುರಿದ ಬಿರುಸಿನ ಮಳೆಯಿಂದಾಗಿ ಎಪಿಎಂಸಿ ಆವರಣದಲ್ಲಿ ನೀರು ಸಂಗ್ರಹವಾಗಿತ್ತು. ಚರಂಡಿಗಳು ಭರ್ತಿಯಾಗಿದ್ದಲ್ಲದೆ, ಮೊದಲನೇ ಪ್ಲಾಟ್ನಲ್ಲಿ ನೀರು ನುಗ್ಗಿತ್ತು. ಆತಂಕಕ್ಕೊಳಗಾದ ರೈತರು ಭತ್ತ, ಶೇಂಗಾ ಹಾಗೂ ಈರುಳ್ಳಿ ಸುರಕ್ಷಿತವಾಗಿಟ್ಟುಕೊಳ್ಳಲು ಹರಸಾಹಸ ಮಾಡಿದರು. ಸುತ್ತಲೂ ಮರಳುಗುಡ್ಡೆ ಹಾಕಿದರೂ ನೀರು ನುಗ್ಗಿತು.
ಕಮಿಷನ್ ಏಜೆಂಟರ್ರ ಮಳಿಗೆಗಳ ಮೇಲಿಂದ ಬೀಳುವ ಮಳೆನೀರು ಶೆಡ್ನೊಳಗೆ ನುಗ್ಗಿತ್ತು. ಮೊದಲನೇ ಶೆಡ್ನಲ್ಲಿ ಸಮಸ್ಯೆ ಮರುಕಳಿಸುತ್ತಲೇ ಇದೆ. ರೈತರು ನಷ್ಟ ಅನುಭವಿಸುತ್ತಲೇ ಇದ್ದಾರೆ. ರೈತರ ನಷ್ಟಕ್ಕೆ ಪರಿಹಾರ ನೀಡಬೇಕು ಹಾಗೂ ಶೆಡ್ ದುರಸ್ತಿ ಮಾಡಬೇಕು ಎಂದು ರೈತ ಸಂಘಟನೆಗಳು ಪ್ರತಿವರ್ಷವೂ ಹೋರಾಟ ಮಾಡಿ, ಮನವಿ ಸಲ್ಲಿಸುತ್ತಾ ಬಂದಿವೆ. ಆದರೂ ಕ್ರಮವಾಗಿಲ್ಲ.
ನೂತನ ಎಪಿಎಂಸಿ ಕಾಯ್ದೆ ಜಾರಿಯಾಗುವವರೆಗೂ ಪ್ರತಿವರ್ಷ ಕೋಟಿಗಟ್ಟಲೆ ಶುಲ್ಕ ಸಂಗ್ರಹಿಸಿದರೂ ಮಳೆನೀರು ಸಂಗ್ರಹವಾಗುವ ಸಮಸ್ಯೆಗೆ ಪರಿಹಾರ ಕಲ್ಪಿಸಲಿಲ್ಲ. ಇದೀಗ ಶುಲ್ಕ ಸಂಗ್ರಹವು ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಸಮಸ್ಯೆಗೆ ಪರಿಹಾರ ಕಲ್ಪಿಸಲು ಸರ್ಕಾರದಿಂದ ಅನುದಾನ ಕೋರಬೇಕಾಗುತ್ತದೆ.
ಅಮರೇಗೌಡ ಬಯ್ಯಾಪುರ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ₹30 ಕೋಟಿ ವೆಚ್ಚದಲ್ಲಿ ಎಪಿಎಂಸಿಯಲ್ಲಿ ನೂತನ ಶೆಡ್ಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ಕೆಲವು ಕಡೆ ಮಳೆನೀರು ಹರಿದುಹೋಗುವುದಕ್ಕೆ ಸಮರ್ಪಕ ವ್ಯವಸ್ಥೆ ಮಾಡಿಲ್ಲ.
‘ರೈತರು ಅನುಭವಿಸುವ ಕಷ್ಟಕ್ಕೆ ಸರಿಯಾಗಿ ಸ್ಪಂದಿಸುವವರಿಲ್ಲ. ಮಳೆನೀರಿನಲ್ಲಿ ಕೃಷಿ ಉತ್ಪನ್ನವು ಪ್ರತಿವರ್ಷ ಹಾಳಾಗುತ್ತಿದೆ. ಈರುಳ್ಳಿಗೆ ಸ್ವಲ್ಪ ನೀರು ಸ್ಪರ್ಶವಾದರೂ ಹಾಳಾಗುತ್ತದೆ. ರೈತರ ನಷ್ಟ ತುಂಬಿಕೊಡುವವರು ಯಾರಿದ್ದಾರೆ. ಅಧಿಕಾರಿಗಳು ಇದನ್ನು ಅರ್ಥ ಮಾಡಿಕೊಂಡು, ಕೂಡಲೇ ದುರಸ್ತಿ ಕೈಗೊಳ್ಳಬೇಕು. ಇಲ್ಲದಿದ್ದರೆ ರೈತರೊಂದಿಗೆ ಮತ್ತೆ ಹೋರಾಟ ಆರಂಭಿಸಲಾಗುವುದು’ ಎಂದು ಕಡಗಂದೊಡ್ಡಿ ಗ್ರಾಮದ ರೈತ ಮುಖಂಡ ಲಕ್ಷ್ಮಣಗೌಡ ಅವರು ಎಚ್ಚರಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.