ಮಾನ್ವಿ (ರಾಯಚೂರು ಜಿಲ್ಲೆ): ತಾಲ್ಲೂಕಿನ ವಲ್ಕಂದಿನ್ನಿ ಮತ್ತು ಜೂಕೂರ ಗ್ರಾಮಗಳಲ್ಲಿ ಭಾನುವಾರ ಕಲುಷಿತ ನೀರು ಸೇವಿಸಿದ್ದರಿಂದ 40 ಜನರಿಗೆ ವಾಂತಿಭೇದಿಯಾಗಿದ್ದು, ಚಿಕಿತ್ಸೆಗಾಗಿ ರಾಯಚೂರಿನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ವಿದ್ಯುತ್ ಸಮಸ್ಯೆಯಿಂದ ಶುದ್ಧ ನೀರಿನ ಘಟಕಗಳು ಸ್ಥಗಿತಗೊಂಡಿದ್ದವು. ಹೀಗಾಗಿ ಜನರಿಗೆ ತುಂಗಭದ್ರಾ ನದಿನೀರನ್ನು ಪೂರೈಸಿದ್ದು ವಾಂತಿಭೇದಿಗೆ ಕಾರಣ.
ಆರೋಗ್ಯ ಇಲಾಖೆ ಸಿಬ್ಬಂದಿಯು ಗ್ರಾಮಗಳಿಗೆ ಧಾವಿಸಿ ಸಮುದಾಯ ಭವನಗಳಲ್ಲೇ ಹೊರರೋಗಿ ವಿಭಾಗ ಆರಂಭಿಸಿ ಚಿಕಿತ್ಸೆ ನೀಡಿ, ಕೆಲವರನ್ನು ಆಸ್ಪತ್ರೆಗಳಿಗೆ ರವಾನಿಸಿದ್ದಾರೆ.
‘ನದಿಯಿಂದ ಪೂರೈಸಲಾದ ನೀರು ಕುಡಿದಿರುವುದು ಗ್ರಾಮಸ್ಥರಿಗೆ ವಾಂತಿ ಬೇಧಿಯಾಗಿ ಅಸ್ವಸ್ಥಗೊಳ್ಳಲು ಕಾರಣವಾಗಿದೆ. ವಲ್ಕಂದಿನ್ನಿಯಲ್ಲಿ 25 ಮತ್ತು ಜೂಕೂರಿನಲ್ಲಿ 15 ಜನರು ಅಸ್ವಸ್ಥಗೊಂಡಿದ್ದಾರೆ‘ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಚಂದ್ರಶೇಖರಯ್ಯ ತಿಳಿಸಿದರು.
ಇದೀಗ ಶುದ್ಧ ನೀರಿನ ಘಟಕಗಳಿಗೆ ನಿರಂತರ ವಿದ್ಯುತ್ ಪೂರೈಸುವುದಕ್ಕೆ ವ್ಯವಸ್ಥೆ ಮಾಡಲಾಗಿದೆ.
ರಾಯಚೂರು ನಗರದಲ್ಲೂ ಕಲುಷಿತ ನೀರು ಸೇವಿಸಿ ಕಳೆದ ತಿಂಗಳು ಏಳು ಜನರು ಮೃತಪಟ್ಟಿರುವ ಕಹಿನೆನಪು ಮರೆಯುವ ಬೆನ್ನಲ್ಲೆ ಮತ್ತೊಂದು ಕಡೆ ಸಾಮೂಹಿಕ ವಾಂತಿಭೇದಿ ಪ್ರಕರಣ ನಡೆದಿರುವುದು ಕಳವಳ ಹುಟ್ಟಿಸಿದೆ.