ಸಿರವಾರ: ತಾಲ್ಲೂಕಿನ ನವಲಕಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವಿಕಾಂಪ್ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಡುಗೆ ಕೋಣೆ ಕಟ್ಟಡದ ಕಾಮಗಾರಿಯು ಕಳಪೆಯಾಗಿದ್ದು, ಕಾಮಗಾರಿ ತನಿಖೆ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ನಾಗವಾರ ಬಣ) ಪದಾಧಿಕಾರಿಗಳು ತಾಲ್ಲೂಕು ಪಂಚಾಯಿತಿ ಸಿಬ್ಬಂದಿ ವಿರುಪಾಕ್ಷಪ್ಪಗೌಡ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ತಾಲ್ಲೂಕು ಪಂಚಾಯಿತಿ ಇಒ ಅವರಿಗೆ ಬರೆದ ಮನವಿಪತ್ರದಲ್ಲಿ ನರೇಗಾ ಯೋಜನೆಯಡಿ ₹ 5.5 ಲಕ್ಷ ವೆಚ್ಚದಲ್ಲಿ ದೇವಿ ಕ್ಯಾಂಪಿನ ಸರ್ಕಾರಿ ಶಾಲೆಗೆ ನಿರ್ಮಾಣ ಮಾಡುತ್ತಿರುವ ಅಡುಗೆ ಕೋಣೆಗೆ ಯಾವುದೇ ಬುನಾದಿ ಹಾಕದೇ, ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ, ಜೆಸಿಬಿ ಯಂತ್ರದ ಮೂಲಕ ಬೇಕಾಬಿಟ್ಟಿಯಾಗಿ ಕಾಮಗಾರಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ಕಳಪೆ ಕಾಮಗಾರಿಯಲ್ಲಿ ಪಿಡಿಒ ಮತ್ತು ಜೆಇ, ಗ್ರಾಮ ಪಂಚಾಯಿತಿ ಸದಸ್ಯರು ಶಾಮೀಲಾಗಿದ್ದು ಕೂಡಲೇ ಕಾಮಗಾರಿಯನ್ನು ನಿಲ್ಲಿಸಿ ತನಿಖೆಗೊಳಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ಜೆ.ಪ್ರಕಾಶ, ಭೀಮಣ್ಣ ನೀಲಗಲ್, ಜಗನ್ನಾಥ, ಅಬ್ರಹಾಂ, ಮೌನೇಶ, ಆಂಜನೇಯ ಕಡದಿನ್ನಿ, ರಮೇಶ್ ಕಡದಿನ್ನಿ ಇದ್ದರು.