ಸಿರವಾರ: ಸಂವಿಧಾನದ ಮೂಲಕ ಪ್ರತಿಯೊಬ್ಬರಲ್ಲಿದ್ದ ಮೇಲು ಕೀಳು, ಭೇದ ಭಾವ, ಧರ್ಮ, ಜಾತಿ, ಉದ್ಯೋಗ ಹೆಸರಿನಲ್ಲಿ ತಾರತಮ್ಯ ಹೋಗಲಾಡಿಸಲು ಶ್ರಮಿಸಿದ ಮಹಾನ್ ನಾಯಕ ಡಾ.ಬಿ.ಅರ್.ಅಂಬೇಡ್ಕರ್ ಎಂದು ಮಾಚನೂರು ಉನ್ನತೀಕರಿಸಿದ ಸ.ಹಿ.ಪ್ರಾ.ಶಾಲೆ ಶಿಕ್ಷಕ ಜಯಪ್ಪ ಕಡದೊಡ್ಡಿ ಹೇಳಿದರು.
ತಾಲ್ಲೂಕಿನ ಮಾಡಗಿರಿ ಗ್ರಾಮದಲ್ಲಿ ಬಹುಜನ ಸಂಘರ್ಷ ಸಮಿತಿಯಿಂದ ಗುರುವಾರ ನಡೆದ 89ನೇ ಮನೆ-ಮನೆಗೆ ಅಂಬೇಡ್ಕರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರು ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಉತ್ತಮ ನಾಗರೀಕನಾಗಬೇಕು ಎಂಬುದು ಅವರ ಆಶಯವಾಗಿತ್ತು, ಅವರು ಹಾಕಿಕೊಟ್ಟ ದಾರಿಯನ್ನು ಸದ್ಬಳಕೆ ಮಾಡಿಕೊಂಡು ನಾವು ಸಮಾಜದ ಪರಿವರ್ತನೆಗೆ ಕೈಜೋಡಿಸೋಣ ಎಂದರು.
ಬಹುಜನ ಸಂಘರ್ಷ ಸಮಿತಿ ಅಧ್ಯಕ್ಷ ಜೆ.ಶರಣಪ್ಪ ಬಲ್ಲಟಗಿ, ಶಿಕ್ಷಕ ಮೋದಿನ್ ಸಾಬ್ ಮಾಚನೂರು, ಸಂಪನ್ಮೂಲ ವ್ಯಕ್ತಿ ಎಂ.ಡಿ.ಹುಸೇನ್ ಮಾಡಗಿರಿ ಮಾತನಾಡಿದರು.
ಮಾಡಗಿರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ತಾರಮ್ಮ, ರವಿ ಮಾಡಗಿರಿ, ಚನ್ನಬಸವ ಮಾಡಗಿರಿ, ಯಲ್ಲಮ್ಮ, ಹನುಮಂತ, ಭಿಮಪ್ಪ ಸೇರಿದಂತೆ ಶಾಲಾ ಮಕ್ಕಳು, ಮಹಿಳೆಯರು ಭಾಗವಹಿಸಿದ್ದರು.