ರಾಯಚೂರು: 'ಈ ಹಿಂದೆ ಗೋವಿನ ಬಗ್ಗೆ ಮಾತನಾಡಿದ್ದಕ್ಕೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನೆಲಕಚ್ಚಿತ್ತು. ಈಗ ಶ್ರೀರಾಮನ ಬಗ್ಗೆಯೂ ಮಾತನಾಡಿದರೆ ನೆಲದ ಒಳಗೆ ಹೋಗ್ತಾರೆ' ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಜಿಲ್ಲಾ ಪಂಚಾಯಿತಿಯಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಪಾಲ್ಗೊಳ್ಳುವ ಪೂರ್ವ ಸುದ್ದಿಗಾರರೊಂದಿಗೆ ಮಾತನಾಡಿದರು.
'ಗೋರಕ್ಷಕರನ್ನು ಕೊಲೆ ಮಾಡಿದವರ ರಕ್ಷಣೆಯನ್ನು ಸಿದ್ದರಾಮಯ್ಯ ಮಾಡಿದ್ದರು. ಗೋಮಾತೆ ಶಾಪದಿಂದಲೇ ಸಿದ್ದರಾಮಯ್ಯ ಸರ್ಕಾರ ಕಳೆದುಕೊಂಡ್ರು, ಚಾಮುಂಡೇಶ್ವರಿ ಕ್ಷೇತ್ರ ಸೋತ್ರು, ಆದ್ರೂ ಸಿದ್ದರಾಮಯ್ಯಗೆ ಬುದ್ಧಿ ಬಂದಿಲ್ಲ' ಎಂದು ಹರಿಹಾಯ್ದರು.
'ರಾಮಮಂದಿರ ನಿರ್ಮಾಣದ ಲೆಕ್ಕ ಕೇಳಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವನು' ಎಂದು ಏಕ ವಚನದಲ್ಲಿ ವಾಗ್ದಾಳಿ ನಡೆಸಿದರು.
'ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಗೌರವವಿಲ್ಲದೆ ವಿವಾದಿತ ಸ್ಥಳ ಎಂದಿದ್ದಾರೆ. ಮಂದಿರ ನಿರ್ಮಾಣದ ಕುರಿತುಅವನು ಮೋದಿ ಅವರ ಬಗ್ಗೆ ಏಕವಚನದಲ್ಲಿ ಮಾತನಾಡಬಹುದೆ' ಎಂದು ಪ್ರಶ್ನಿಸಿದರು.
'ರಾಮನ ಬಗ್ಗೆ ಹಗುರವಾಗಿ ಮಾತನಾಡುವ ಪ್ರವೃತ್ತಿ ಬಿಡಬೇಕು. ಮಂದಿರ ಕಟ್ಟಲು ಕೂಲಿ ಮಾಡುವ ಒಬ್ಬ ವ್ಯಕ್ತಿ ₹10 ನೀಡಿದ್ದಾರೆ. ಅವರು ಲೆಕ್ಕ ಕೇಳಲಿ. ಆದರೆ ಇವನಾರು ಲೆಕ್ಕ ಕೇಳಲು' ಎಂದು ಕಿಡಿ ಕಾರಿದರು.