ಮಸ್ಕಿ: ಪಟ್ಟಣವನ್ನು ಉದ್ಯಾನ ನಗರವ್ನಾಗಿ ಮಾಡಬೇಕು. ಸಾರ್ವಜನಿಕರ ವಾಯು ವಿಹಾರಕ್ಕೆ ಉತ್ತಮ ಸ್ಥಳ ಕಲ್ಪಿಸಬೇಕು ಎಂದು ವಿವಿಧ ಬಡವಾಣೆಗಳಲ್ಲಿ ಪುರಸಭೆ ನಿರ್ಮಿಸಿದ ಸಾರ್ವಜನಿಕರ ಉದ್ಯಾನಗಳು ನಿರ್ವಹಣೆಯ ಕೊರತೆಯಿಂದಾಗಿ ಹಾಳು ಕೊಂಪೆಯಾಗಿ ಜಾಲಿಗಿಡಗಳ ಮಧ್ಯ ಮರೆಯಾಗಿವೆ.
ಪುರಸಭೆಯ ವ್ಯಾಪ್ತಿಯ ನಗರ ಪ್ರಾಧಿಕಾರದಿಂದ ಅನುಮೋದನೆಗೊಂಡ ಬಡಾವಣೆಗಳಲ್ಲಿ ಸಾರ್ವಜನಿಕರ ಉದ್ಯಾನಕ್ಕೆಂದು ಮೀಸಲಿಟ್ಟ ಜಾಗದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಉದ್ಯಾನಗಳು ಸ್ಥಳೀಯರ ಶೌಚಕ್ಕೆ ಹಾಗೂ ಅಕ್ರಮ ಚಟುವಟಿಕೆಗಳಿಗೆ ಬಳಕೆಯಾಗುತ್ತಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಾಂಧಿ ನಗರದ ಜೊಗಿನ್ ರಾಮಣ್ಣ ಸ್ಮಾರಕ ಪ್ರೌಢ ಶಾಲೆಯ ಹತ್ತಿರ ನಿರ್ಮಿಸಿದ ಉದ್ಯಾನ ವರ್ಷದಲ್ಲಿ ಹಾಳಾಗಿದೆ. ಸಾರ್ವಜನಿಕರು ಕುಳಿತುಕೊಳ್ಳಲು ಹಾಕಿದ ಬೆಂಚಗಳು ಮುರಿದಿವೆ. ಒಳಗಡೆ ಗಿಡಗಂಟೆಗಳು ಬೆಳೆದು ಹಾವು ಚೋಳುಗಳ ಕೇಂದ್ರವಾಗಿದೆ. ಉದ್ಯಾನದ ಗೇಟ್ಗಳು ಮುರಿದಿವೆ. ಸುತ್ತಲೂ ಜಾಲಿ ಗಡಿಗಳು ಬೆಳೆದಿದ್ದು ಇದು ಅಕ್ರಮ ಚಟುವಟಿಕೆಯ ತಾಣವಾಗಿದೆ ಎನ್ನುವುದಕ್ಕೆ ಒಳಗಡೆ ಬಿದ್ದಿರುವ ಮದ್ಯದ ಬಾಟಲ್, ಇಸ್ಪೆಟ್ ಎಲೆಗಳು ಸಾಕ್ಷಿಯಾಗಿವೆ.
ವಾರ್ಡ್ 1 ರ ತುಂಗಭದ್ರಾ ಎಡದಂಡೆ ಕಾಲುವೆ ಬಳಿ ನಿರ್ಮಿಸಿದ ಉದ್ಯಾನ ಅವೈಜ್ಞಾನಿಕವಾಗಿದೆ. ಉದ್ಯಾನದ ಸ್ಥಳ ಸಂಪೂರ್ಣ ಗುರುತಿಸಿದ ಅರ್ಧ ಜಾಗ ಬಿಟ್ಟು ಉಳಿದ ಅರ್ಧದಲ್ಲಿ ಉದ್ಯಾನ ನಿರ್ಮಿಸಲಾಗಿದೆ. ಕಳಿತುಕೊಳ್ಳಲು ಬೆಂಚಗಳನ್ನು ಹಾಕಲಾಗಿದ್ದರೂ ಸಹ ಒಳಗಡೆ ಹೋಗಲು ಸಾರ್ವಜನಿಕರು ಹಿಂದೇಟು ಹಾಕುತ್ತಿದ್ದಾರೆ. ಗಿಡಗಂಟೆಗಳು, ಸುತ್ತಲೂ ಜಾಲಿಗಡಿಗಳು ಬೆಳೆದು ಇದು ಹಾಳಾಗಿದೆ. ರಾತ್ರಿ ಉದ್ಯಾನದಲ್ಲಿ ಹಾಕಲಾದ ವಿದ್ಯುತ್ ಲೈಟ್ಗಳು ಕೇವಲ ನೋಡುವುದಕಷ್ಟೇ ಅವು ರಾತ್ರಿ ಬೆಳಗುವುದಿಲ್ಲ ಎಂದು ಸ್ಥಳೀಯ ನಿವಾಸಿಯೊಬ್ಬರು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಸಿಂಧನೂರು ರಸ್ತೆ ಠಾಕೂರ ಲೇಔಟನಲ್ಲಿನ ಉದ್ಯಾನದಲ್ಲಿ ನಿರ್ಮಿಸಿದ ವಾಕಿಂಗ್ ಟ್ರ್ಯಾಕ್ ಕೂಡಾ ನಿರ್ಹಹಣೆಯ ಕೊರತೆ ಎದುರಿಸುತ್ತಿದೆ. ಹೀಗೆ ವಿವಿಧೆಡೆಯ ಉದ್ಯಾನಗಳು ಸಂಪೂರ್ಣ ಹಾಳಾಗಿದ್ದು ಅವುಗಳನ್ನು ಅಭಿವೃದ್ಧಿ ಪಡಿಸಬೇಕು ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.
**
ವಿವಿಧ ಬಡವಾಣೆಗಳಲ್ಲಿ ನಿರ್ಮಿಸಿದ ಉದ್ಯಾನಗಳ ನಿರ್ವಹಣೆ ಮಾಡುವುದು ಪುರಸಭೆಗೆ ಕಷ್ಟವಾಗಿದೆ. ಖಾಸಗಿ ವ್ಯಕ್ತಿಗಳಿಗೆ ಉದ್ಯಾನಗಳ ನಿರ್ವಹಣೆಯನ್ನು ವಹಿಸಲು ಕ್ರಮ ಕೈಗೊಳ್ಳಲಾಗುವುದು
ಹನುಮಂತಮ್ಮ ನಾಯಕ, ಮುಖ್ಯಾಧಿಕಾರಿ ಪುರಸಭೆ
**
ಸಾರ್ವಜನಿಕರ ಉಪಯೋಗಕ್ಕೆ ನಿರ್ಮಿಸಿದ ಉದ್ಯಾನಗಳು ಸರಿಯಾದ ನಿರ್ವಹಣೆ ಇಲ್ಲದೇ ಹಾಳಾಗುತ್ತಿವೆ. ಪುರಸಭೆ ಕೂಡಲೇ ಇವುಗಳ ಅಭಿವೃದ್ಧಿಗೆ ಕ್ರಮಕೈಗೊಳ್ಳಬೇಕು.
ಮೌನೇಶ ನಾಯಕ, ಸ್ಥಳೀಯ ನಿವಾಸಿ ಮಸ್ಕಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.