ಲಿಂಗಸುಗೂರು: ‘ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ನಾಡು, ನುಡಿ ಸಂರಕ್ಷಣೆ ಸೇರಿದಂತೆ ಸಾಹಿತ್ಯ ಸಂಸ್ಕೃತಿ ಉಳಿಸಿ ಬೆಳೆಸಲು ಶ್ರಮಿಸುತ್ತ ಬಂದಿದೆ. ದಾನಿಗಳಿಂದ ದತ್ತಿ ಸ್ವೀಕರಿಸಿ ವಿಶೇಷ ಉಪನ್ಯಾಸ ನಡೆಸುತ್ತಿದ್ದು ಸಾಹಿತ್ಯ ಅಭಿಮಾನಿಗಳು ಸಹಕರಿಸಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಅಧ್ಯಕ್ಷ ಮಲ್ಲಿಕಾರ್ಜುನಗೌಡ ಗೌಡೂರು ಮನವಿ ಮಾಡಿದರು.
ಶನಿವಾರ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ಪರಿಷತ್ತು ನಿಯಮಾವಳಿಗಳಿಗೆ ತಿದ್ದುಪಡಿ ತರುತ್ತಿದೆ. ತಾಲ್ಲೂಕು ಮಟ್ಟದಲ್ಲಿ ವಿಭಿನ್ನ ಕಾರ್ಯಕ್ರಮ ಆಯೋಜಿಸುವ ಮೂಲಕ ಕ್ಷೇತ್ರದ ಬೆಳವಣಿಗೆಗೆ ನಾವುಗಳೆಲ್ಲ ಒಗ್ಗಟ್ಟಾಗಿ ಶ್ರಮಿಸೋಣ’ ಎಂದರು.
ವ್ಯಕ್ತಿತ್ವ ನಿರ್ಮಾಣದಲ್ಲಿ ವಚನ ಸಾಹಿತ್ಯ ಕುರಿತು ಮುಖ್ಯಗುರು ಬಸಪ್ಪ ಹಂದ್ರಾಳ, ವೀರಶೈವ ಸಾಹಿತ್ಯ ಕುರಿತು ಸಾಹಿತಿ ಡಾ. ಮಹಾದೇವಪ್ಪ ನಾಗರಹಾಳ, ಪ್ರಗತಿಪರ ಸಾಹಿತ್ಯ ಕುರಿತು ಮುಖ್ಯಗುರು ಶಂಕರಪ್ಪ ಸಕ್ರಿ ದತ್ತಿ ಉಪನ್ಯಾಸ ನೀಡಿದರು. ದತ್ತಿ ದಾನಿಗಳಾ ಮಂಜುನಾಥ ಕಾಮಿನ್, ದೊಡ್ಡಪ್ಪ ಹೆಸರೂರು ಇದ್ದರು.
ಶ್ರೀಶೈಲ ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ದೇವರಡ್ಡಿ ಮೇಟಿ ಉದ್ಘಾಟಿಸಿದರು. ಪ್ರಾಚಾರ್ಯ ರಾಮಬಾಬು, ಸಾಹಿತಿಗಳಾದ ಹುಸೇನಪ್ಪ ಮುಂಡರಗಿ, ರಹಿಮಾನಸಾಬ ನದಾಫ್, ಸುಜಿತ್ ಆನಂದ, ಶ್ರೀಕಾಂತ ಮಠ, ಕಮಲಾಕ್ಷಿ ಸೊಪ್ಪಿಮಠ ಉಪಸ್ಥಿತರಿದ್ದರು.