ರಾಯಚೂರು: ‘ರೈತರು ಕೃಷಿಯ ಜೊತೆ ಪಶುಪಾಲನೆ ಮಾಡುವ ಮೂಲಕ ಹೆಚ್ಚಿನ ಆದಾಯ ಪಡೆಯಲು ಪ್ರಯತ್ನಿಸಬೇಕು’ ಎಂದು ರಾಯಚೂರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಪವಾರ್ ಸಲಹೆ ನೀಡಿದರು.
2023-24ನೇ ಸಾಲಿನಲ್ಲಿ ವಿಸ್ತರಣಾ ಘಟಕಗಳಿಗೆ ಬಲಪಡಿಸುವಿಕೆ ಕಾರ್ಯಕ್ರಮಗಳ ಯೋಜನೆಯಡಿಯಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸಾವಯವ ಕೃಷಿ ಸಂಶೋಧನಾ ಸಂಸ್ಥೆ ಸಭಾಂಗಣದಲ್ಲಿ ರೈತರಿಗೆ ವೈಜ್ಞಾನಿಕ ಹೈನುಗಾರಿಕೆ, ಕುರಿ ಹಾಗೂ ಮೇಕೆಗಳ ಸಾಕಾಣೆಕೆ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ತರಬೇತಿಯಲ್ಲಿ ವೈಜ್ಞಾನಿಕ ವಿಧಾನದಲ್ಲಿ ಹೇಗೆ ಕುರಿ ಮೇಕೆ ಸಾಕಾಣಿಕೆ ಮಾಡಿ ಹೆಚ್ಚಿನ ಆದಾಯ ಪಡೆಯಲು ಸಾಧ್ಯ ಎನ್ನುವುದನ್ನು ತಿಳಿಸಲಾಗಿದೆ. ಶಿಬಿರಾರ್ಥಿಗಳು ಅದರ ಪೂರ್ಣ ಲಾಭ ಪಡೆದುಕೊಳ್ಳಬೇಕು’ ಎಂದು ಹೇಳಿದರು.
‘ಪಶು ಸಂಗೋಪನೆ ಇಲಾಖೆಯಿಂದ ತರಬೇತಿ ಪಡೆದವರಿಗೆ ಬ್ಯಾಂಕ್ನಿಂದಲೂ ಸಾಲ ಸೌಲಭ್ಯ ದೊರೆಯುತ್ತದೆ. ಸ್ಥಳೀಯ ಸಂಪನ್ಮೂಲ ಲಭ್ಯತೆಯ ಆಧಾರದ ಮೇಲೆ ತೀರ್ಮಾನ ಕೈಗೊಂಡು ಉತ್ತಮ ಆದಾಯ ಗಳಿಸಲು ಸಾಧ್ಯವಿದೆ’ ಎಂದು ತಿಳಿಸಿದರು.
ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯದ ಸಾವಯವ ಕೃಷಿ ವಿಭಾಗದ ಮುಖ್ಯಸ್ಥ ಡಾ.ಬಸವಣ್ಣಪ್ಪ ತರಬೇತಿಯಲ್ಲಿ ಭಾಗವಹಿಸಿದ್ದ ರೈತರಿಗೆ ಪ್ರಮಾಣಪ್ರತ ವಿತರಿಸಿದರು. ತರಬೇತಿಯಲ್ಲಿ ಒಟ್ಟು 120 ರೈತರು ಭಾಗವಹಿಸಿದ್ದರು.
ಪಶು ಪಾಲನಾ ಇಲಾಖೆಯ ಹಿರಿಯ ಅಧಿಕಾರಿ ಡಾ.ಕೃಷ್ಣಮೂರ್ತಿ, ಇಲಾಖೆಯ ಉಪ ನಿರ್ದೇಶಕರಾದ ಡಾ.ಅಶೋಕ ಕೋಲಕಾರ, ಡಾ.ಎಸ್.ಎಸ್.ಪಾಟೀಲ, ಮುಖ್ಯ ಪಶು ವೈದ್ಯಾಧಿಕಾರಿ ಡಾ.ಬಿ.ಎಸ್.ಪಾಟೀಲ, ಹಿರಿಯ ವಿಜ್ಞಾನಿ ಡಾ.ಶ್ರೀಧರ, ಹಿರಿಯ ಪಶು ವೈದ್ಯಾಧಿಕಾರಿ ಡಾ.ಶೋಯಬ, ಡಾ.ಲಂಕೇಶ, ಡಾ.ಆನಂದ ಉಪಸ್ಥಿತರಿದ್ದರು.