ರಾಯಚೂರು: ರಾಯಚೂರು ಲೋಕಸಭಾ ಕ್ಷೇತ್ರದ ಚುನಾವಣೆ ಸುಗಮವಾಗಿ ನಡೆದಿದೆ. ರಾಜಕೀಯ ಮುಖಂಡರು, ಕಾರ್ಯಕರ್ತರು 15 ದಿನಗಳವರಗೆ ಕ್ಷೇತ್ರದಲ್ಲಿ ಸಂಚರಿಸಿ ಸುಸ್ತಾಗಿ ಮನೆಗಳಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಕೆಲವರು ನೆಮ್ಮದಿಗಾಗಿ ಪ್ರವಾಸಕ್ಕೆ ಹೋಗಿದ್ದಾರೆ. ಇದೀಗ ಎಲ್ಲೆಡೆ ಸೋಲು–ಗೆಲುವಿನ ಲೆಕ್ಕಾಚಾರ ಜೋರಾಗಿ ನಡೆದಿದೆ.
ಬಿಜೆಪಿ ಗೆಲ್ಲುತ್ತಾ? ಕಾಂಗ್ರೆಸ್ ಗೆಲ್ಲುತ್ತಾ? ಯಾರು ಗೆಲ್ಲಬಹುದು ಎನ್ನುವ ಪ್ರಶ್ನೆ ಪ್ರತಿಯೊಬ್ಬರನ್ನೂ ಕಾಡುತ್ತಿದೆ. ಚುನಾವಣಾ ಕಣದಲ್ಲಿದ್ದ ಉಳಿದ ಅಭ್ಯರ್ಥಿಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ಬಹುತೇಕರು ಬಿಜೆಪಿ–ಕಾಂಗ್ರೆಸ್ ಮಧ್ಯೆ ಗೆಲುವಿನ ಅಂತರ ಲೆಕ್ಕ ಹಾಕುತ್ತ ವಿಶ್ಲೇಷಿಸಿದರೆ, ಇನ್ನು ಕೆಲವರು ಫಲಿತಾಂಶ ಏನು ಆಗುತ್ತದೆಯೋ ಗೊತ್ತಿಲ್ಲ ಎಂದು ತಳಮಳದಿಂದಲೇ ಹೇಳಿಕೊಳ್ಳುತ್ತಿದ್ದಾರೆ.
ಬಿಜೆಪಿಯ ರಾಜಾ ಅಮರೇಶ್ವರ ನಾಯಕ ಅವರು ಮತ್ತೊಮ್ಮೆ ಗೆಲ್ಲುವ ಉಮೇದಿನಲ್ಲಿ ಇದ್ದಾರೆ. ಕಾಂಗ್ರೆಸ್ನ ಜಿ.ಕುಮಾರ ನಾಯಕ ಲೋಕಸಭೆ ಪ್ರವೇಶ ಮಾಡುವುದು ಖಚಿತ ಎನ್ನುವ ಆತ್ಮವಿಶ್ವಾಸದಲ್ಲಿ ಇದ್ದಾರೆ. ಆದರೆ, ಅತ್ಯಂತ ಕಡಿಮೆ ಅಂತರದಲ್ಲೇ ಒಬ್ಬರ ಕೊರಳಿಗೆ ವಿಜಯ ಮಾಲೆ ಬೀಳಲಿದೆ.
ಬಿಜೆಪಿಯವರು ಮೋದಿ ಗಾಳಿಯನ್ನೇ ನಂಬಿದ್ದಾರೆ. ಕಾಂಗ್ರೆಸ್ನವರು ಗ್ಯಾರಂಟಿ ಯೋಜನೆಗಳು ನಮ್ಮ ಕೈಬಿಡಲು ಸಾಧ್ಯವಿಲ್ಲ ಎನ್ನುವ ವಿಶ್ವಾಸದಲ್ಲಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶೇ 53.9ರಷ್ಟು ಹಾಗೂ ಕಾಂಗ್ರೆಸ್ ಅಭ್ಯರ್ಥಿ ಶೇ 43.3ರಷ್ಟು ಮತಗಳನ್ನು ಪಡೆದುಕೊಂಡಿದ್ದರು. ಕೊನೆ ಕ್ಷಣದಲ್ಲಿ ರಾಜಕೀಯ ಪಕ್ಷಗಳ ಗೆಲವಿನ ಲೆಕ್ಕಾಚಾರವೇ ಬುಡಮೇಲಾದರೂ ಅಚ್ಚರಿ ಇಲ್ಲ.
ಕ್ಷೇತ್ರದಲ್ಲಿ ಪುರುಷರಿಂದಲೇ ಹೆಚ್ಚು ಮತದಾನ ಸುರುಪುರ ಕ್ಷೇತ್ರದಲ್ಲಿ ಗರಿಷ್ಠ ಮತದಾನ ಪಂಚಾಯಿತಿ ಕಟ್ಟೆಗಳಲ್ಲಿ ಗೆಲುವಿನ ಲೆಕ್ಕಾಚಾರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.