ರಾಯಚೂರು: ಸ್ವಾಭಿಮಾನ ಮತ್ತು ದೇಶಭಕ್ತಿ ವಿಷಯಗಳಲ್ಲಿ ರಜಪೂತ ಸಮಾಜ ಇತರೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಬಣ್ಣಿಸಿದರು.
ನಗರದ ಉದಾಸಿ ಮಠದಲ್ಲಿ ಜಿಲ್ಲಾ ರಜಪೂತ ಸಮಾಜದಿಂದ ಭಾನುವಾರ ಸಂಜೆ ಏರ್ಪಡಿಸಿದ್ದ ಮಹಾರಾಣಾ ಪ್ರತಾಪ ಸಿಂಗ್ ಅವರ 482ನೇ ಶ್ರೀಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶದ ಸ್ವಾತಂತ್ರ್ಯ ಪೂರ್ವ ಮತ್ತು ನಂತರ ರಾಜಕಾರಣದಲ್ಲಿ ರಜಪೂತ ಕೊಡುಗೆ ಅಪಾರವಾಗಿದೆ. ದೇಶದ ರಕ್ಷಣೆಯಲ್ಲಿ ರಜಪೂತ ಸಮಾಜ ಮುಂಚೂಣಿಯಲ್ಲಿದೆ ಎಂದು ಹೇಳಿದರು.
ಉತ್ತರಭಾಗದಲ್ಲಿ ಅತ್ಯಂತ ಪ್ರಬಲ ಸಮುದಾಯವಾಗಿರುವ ರಜಪೂತರು ಇಂದು ದೇಶದ ಎಲ್ಲಾ ಭಾಗಗಳಲ್ಲಿ ಕಾಣಬಹುದು. ಸಮಾಜದ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಶಾಸಕ ಡಾ. ಶಿವರಾಜ ಪಾಟೀಲ,ಎಐಸಿಸಿ ಕಾರ್ಯದರ್ಶಿ ಎನ್.ಎಸ್. ಬೋಸರಾಜು ಮಾತನಾಡಿದರು. ಮಹಾರಾಣಾ ಪ್ರತಾಪಸಿಂಗ್ ಜಯಂತಿಯನ್ನು ಸರ್ಕಾರ ಆಚರಣೆ ಮಾಡಬೇಕು. ರಾಜಪುತ್ ಅಭಿವೃದ್ಧಿ ನಿಗಮ ಸ್ಸಾಪಿಸಬೇಕು. ವಿವಿಧ ನಿಗಮ ಮಂಡಳಿಗಳಿಗೆ ಸಮಾಜದವರನ್ನು ನಾಮ ನಿರ್ದೇಶನ ಮಾಡಬೇಕು ಹಾಗೂ ರಾಜಪುತ ಸಮಾಜದ ಸಭಾಭವನ ನಿರ್ಮಾಣಕ್ಕೆ ₹1 ಕೋಟಿ ಅನುದಾನ ನೀಡಬೇಕು ಎಂದು ಮನವಿ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕರ ಹಾಗೂ ಸಂಸದ ಅನುದಾನ ಶಾಲಾ ಕೊಠಡಿಗಳಿಗೆ ಭೂಮಿ ಪೂಜೆ ಮಾಡಲಾಯಿತು. ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಸಮಾಜದ ಅಧ್ಯಕ್ಷ ಗೋಪಾಲ ಸಿಂಗ್ ಮಾತನಾಡಿದರು. ಉಪಾಧ್ಯಕ್ಷ ಪ್ರೀತಮಸಿಂಗ್, ಶಿವಶಂಕರ ಸಿಂಗ್, ಪ್ರೇಮಪ್ರಸಾದ ಶುಕ್ಲಾ, ಆರ್ಎಪಿಸಿಎಂಎಸ್ ಅಧ್ಯಕ್ಷ ಜಯವಂತರಾವ್ ಪತಂಗೆ ಇದ್ದರು.
ನಿಹಾರಿಕಾ ಪ್ರಾರ್ಥಿಸಿದರು. ಬಿ.ವೆಂಕಟಸಿಂಗ್ ಸ್ವಾಗತಿಸಿದರು. ಕಾಂಗ್ರೆಸ್ ಮುಖಂಡ ಕೆ.ಶಾಂತಪ್ಪ, ಜಿ. ಶಿವಮೂರ್ತಿ, ಜಯಣ್ಣ, ಬಿಜೆಪಿ ಮುಖಂಡ ಕಡಗೋಳ ಆಂಜನೇಯ, ರವಿ ಜಲ್ದಾರ್, ನರಸಿಂಹರೆಡ್ಡಿ ಇದ್ದರು.