ರಾಯಚೂರು: ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಗುರು ವೈಭವೋತ್ಸವ ನಿಮಿತ್ತ ಸಪ್ತರಾತ್ರೋತ್ಸವ ಕಾರ್ಯಕ್ರಮಗಳ ಕೊನೆಯ ದಿನವಾದ ಶನಿವಾರ, ರಾಯರ ವರ್ಧಂತಿ ಉತ್ಸವ ಸಂಭ್ರಮದಿಂದ ನಡೆಯುತ್ತಿದೆ.
ರಾಯರ ಜನ್ಮದಿನ ಇದಾಗಿರುವುದರಿಂದ ತಿರುಪತಿ ತಿರುಮಲದಿಂದ ಆಡಳಿತಾಧಿಕಾರಿಗಳು ವೆಂಕಟೇಶ್ವರ ಸ್ವಾಮಿಯ ಶೇಷವಸ್ತ್ರವನ್ನು ತೆಗೆದುಕೊಂಡು ಬಂದಿದ್ದರು. ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಶೇಷವಸ್ತ್ರ ಬರಮಾಡಿಕೊಂಡು, ತಲೆಮೇಲೆ ಹೊತ್ತು ಮೆರವಣಿಗೆ ಮೂಲಕ ರಾಯರ ಸನ್ನಿಧಿಗೆ ತಂದಿರಿಸಿದರು.
ರಾಯಚೂರು ಮೂಲವೃಂದಾವನಕ್ಕೆ ಪಂಚಾಮೃತ ಮಹಾಭಿಷೇಕ ನೆರವೇರಿಸಿ, ಶ್ರೀಗಂಧ ಲೇಪನಗೊಳಿಸಿ, ವೈವಿಧ್ಯಮಯ ಪುಷ್ಪಗಳಿಂದ ಅಲಂಕಾರ ಮಾಡಿ ಶೇಷವಸ್ತ್ರವನ್ನು ಸಮರ್ಪಿಸಿದರು.
ಆನಂತರ ಮಹಾಮಂಗಳಾರತಿ ಬೆಳಗಿ, ಪೂಜಾ ವಿಧಿ ವಿಧಾನಗಳನ್ನು ಮಾಡಲಾಯಿತು. ಈ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ವಿವಿಧೆಡೆಯಿಂದ ಭಕ್ತರು ನೆರೆದಿದ್ದಾರೆ.