ಮಸ್ಕಿ: ’ಮಸ್ಕಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಮತದಾರರ ಒಲವು ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಅವರ ಪರವಾಗಿದ್ದು, ಇವರ ಗೆಲುವಿಗೆ ಹಿಂದುಳಿದ ಕಾಯಕ ಸಮುದಾಯಗಳ ಪಾತ್ರ ನಿರ್ಣಯಕವಾಗಲಿದೆ‘ ಎಂದು ಡಿ.ದೇವರಾಜ ಅರಸು ನಿಗಮದ ಅಧ್ಯಕ್ಷ ಆರ್.ರಘು ಕೌಟಿಲ್ಯ ಹೇಳಿದರು.
ಬಹಿರಂಗ ಪ್ರಚಾರ ಅಂತ್ಯಗೊಳ್ಳುವುದಕ್ಕೆ ಮುನ್ನ ಅವರು ಗುರುವಾರ ಮಸ್ಕಿಯಲ್ಲಿ ನಡೆದ ವಿವಿಧ ಸಮುದಾಯಗಳ ಪ್ರಮುಖರ ಸಭೆಯಲ್ಲಿ ಮಾತನಾಡಿದರು.
‘ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿ ಬಗ್ಗೆ ವಿಶೇಷ ಕಾಳಜಿ ಇಟ್ಟುಕೊಂಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕೈ ಬಲಪಡಿಸಲು ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬೇಕಿದೆ‘ ಎಂದರು.
‘ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷ ವಿಜಯೇಂದ್ರ ಅವರು ಸಮುದಾಯಗಳ ಎಲ್ಲ ಬೇಡಿಕೆಗಳಿಗೆ ಸ್ಪಂದಿಸುವ ಕಾಳಜಿಯುಳ್ಳವರಾಗಿದ್ದಾರೆ. ಈ ಚುನಾವಣೆಯಲ್ಲಿ ಅವರು ನೇತೃತ್ವ ವಹಿಸಿರುವುದು ಕಾಯಕ ಸಮುದಾಯಗಳಿಗೆ ಬಹು ನಿರೀಕ್ಷೆ ಹುಟ್ಟಿಸಿದೆ‘ ಎಂದರು.
ಸಭೆಯ ನಂತರ ವಿವಿಧ ಸಮುದಾಯಗಳ ಜನರು ವಾಸವಿರುವ ಕಾಲೊನಿಗಳಿಗೆ ತೆರಳಿ ಕೊನೆಯ ಸುತ್ತಿನ ಪ್ರಚಾರ ನಡೆಸಿದರು.