ಸಿಂಧನೂರು: ‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿವೃದ್ಧಿಗಾಗಿ ಪ್ರಯತ್ನಿಸುತ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಬೇಕು‘ ಎಂದು ಕೃಷಿ ಬೆಲೆ ಆಯೋಗದ ರಾಜ್ಯ ಘಟಕದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಮತದಾರರಲ್ಲಿ ಮನವಿ ಮಾಡಿದರು.
ತಾಲ್ಲೂಕಿನ ವಿರುಪಾಪುರ, ನಾಲ್ಕುಮೈಲ್ ಕ್ಯಾಂಪ್, ಅರಳಹಳ್ಳಿ, ಏಳುಮೈಲ್ ಕ್ಯಾಂಪ್ಗಳಲ್ಲಿ ಭಾನುವಾರ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಅವರ ಪರವಾಗಿ ಭಾನುವಾರ ಮತಯಾಚನೆ ಮಾಡಿ ಮಾತನಾಡಿದರು.
ಕೊಪ್ಪಳ ಸಂಸದ ಸಂಗಣ್ಣ ಕರಡಿ ಮಾತನಾಡಿ, ‘ಪ್ರತಾಪಗೌಡ ಪಾಟೀಲ ಅವರು ಖರೀದಿಯಾಗಿದ್ದಾರೆಂದು ಆರೋಪಿಸುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೂಡ ಈ ಹಿಂದೆ ಜೆಡಿಎಸ್ದಿಂದ ಕಾಂಗ್ರೆಸ್ಗೆ ಹೋದಾಗ ಎಷ್ಟು ಹಣಕ್ಕೆ ಖರೀದಿಗೆ ಆಗಿದ್ದರೆಂದು ಪ್ರಶ್ನಿಸಬೇಕಾಗುತ್ತದೆ. ಈ ಹಿಂದೆ ತಾವು ಕೂಡ ಜೆಡಿಎಸ್ದಿಂದ ಬಿಜೆಪಿಗೆ ಬಂದಿರುವುದಾಗಿ ನೆನಪಿಸಿಕೊಂಡರು. ಬಹುತೇಕರು ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಪಕ್ಷ ಬದಲಾಯಿಸುವುದು ಸಾಮಾನ್ಯ‘ ಎಂದರು.
ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ಮಾತನಾಡಿ, ‘ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ಬಿ.ಎಸ್.ಯಡಿಯೂರಪ್ಪ ಸಿಎಂ ಆದ ತಕ್ಷಣ ರಾಜ್ಯದಲ್ಲಿ ಸಮೃದ್ಧಿ ಮಳೆ ಬಂತು. ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯ ಸಂಪೂರ್ಣ ಬರಗಾಲ ಕಂಡಿತ್ತು. ಅವರ ಸರ್ಕಾರದ ಕಾಲಗುಣವೇ ಸರಿಯಾಗಿರಲಿಲ್ಲ. ನೀರಾವರಿ ಯೋಜನೆಗೆ ಹಣ ನೀಡುವುದಾಗಿ ರೈತರಿಗೆ ಸುಳ್ಳು ಹೇಳಿದರು‘ ಎಂದು ಅಪಾದಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಅಮರೇಗೌಡ ವಿರೂಪಾಪುರ ಮಾತನಾಡಿದರು.
ಮುಖಂಡರಾದ ಸಣ್ಣ ವೀರಬಸನಗೌಡ, ನಾಗಣ್ಣ ವಂದ್ಲಿ, ಚನ್ನಪ್ಪ ಕಲ್ಲಪಟ್ಟಿ, ರಾಮಲಿಂಗಪ್ಪ, ವೀರನಗೌಡ, ಬೀರಪ್ಪ, ಲಿಂಗಪ್ಪ, ಶರಣಪ್ಪ ಮೇಟಿ, ಮೌಲಪ್ಪ, ಈರಪ್ಪ, ನಗರಸಭೆ ಸದಸ್ಯ ಮಲ್ಲಿಕಾರ್ಜುನ ಜೀನೂರು, ನಯೋಪ್ರಾ ಸದಸ್ಯ ಜಡಿಯಪ್ಪ ಹೂಗಾರ, ಶರಣಬಸವ ನಾಗರಬೆಂಚಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.