ಮುದಗಲ್ (ರಾಯಚೂರು): ಮಸ್ಕಿ ಉಪಚುನಾವಣೆ ಪ್ರಚಾರಕ್ಕಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮುದಗಲ್ ಪಟ್ಟಣದಲ್ಲಿದ್ದಾರೆ.
ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ ಅವರ ಮನೆಯಲ್ಲಿ ಉಳಿದುಕೊಂಡಿರುವ ಯಡಿಯೂರಪ್ಪ ಅವರು, ವಿವಿಧ ಸಮಾಜಗಳ ಮುಖಂಡರ ಸರದಿ ಸಭೆಗಳನ್ನುದ್ದೇಶಿಸಿ ಮಾತನಾಡುತ್ತಿದ್ದಾರೆ.
ವೀರಶೈವ ಲಿಂಗಾಯತ ಸಮಾಜ, ವಾಲ್ಮೀಕಿ ಸಮಾಜ ಹಾಗೂ ಹಾಲುಮತ ಸಮಾಜದ ಸಭೆಗಳು ನಡೆಯುತ್ತಿವೆ.
ದೊಡ್ಡನಗೌಡ ಪಾಟೀಲ ಅವರ ಮನೆ ಆವರಣದಲ್ಲೇ ವೇದಿಕೆ ನಿರ್ಮಿಸಲಾಗಿದೆ. ಇನ್ನೊಂದು ಭಾಗದಲ್ಲಿ ಎಲ್ಲರಿಗೂ ಭೋಜನ ವ್ಯವಸ್ಥೆ ಮಾಡಲಾಗಿದೆ.
ಡಿ.ಎಸ್.ಹುಲಗೇರಿ ಅವರ ಮನೆಯಲ್ಲಿ ಸಿದ್ದರಾಮಯ್ಯ ಉಳಿದಿದ್ದು, ಮಟ್ಟೂರು, ಹಿರೇ ಬುದ್ದಿನ್ನಿ ಗ್ರಾಮಗಳಲ್ಲಿ ಮತಯಾಚನೆ ಮಾಡುವರು. ಮಸ್ಕಿ ಪಟ್ಟಣದಲ್ಲಿ ಸಂಜೆ ಸಾರ್ವಜನಿಕ ಬಹಿರಂಗ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡುವರು.